ಪದ್ಯ ೩೨: ಭೀಮನು ಯಾರನ್ನು ಸಂಹರಿಸಿದನು?

ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು (ದ್ರೋಣ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ವಿಂದ, ಅನುವಿಂದ, ಚಿತ್ರಕನ ಮಗನಾದ ಚಿತ್ರಾಂಗದ, ಸಾನಂದ, ದುಸ್ಸಹ, ಶಂಕುಕರ್ಣ, ದೀರ್ಘಬಾಹು, ಚಿತ್ರಾಂಬಕರನ್ನು ಸಂಹರಿಸಿದ ಭೀಮನು ಕರ್ಣ ಅಶ್ವತ್ಥಾಮರನ್ನು ಮೂದಲಿಸಿ ಯುದ್ಧಕ್ಕೆ ನುಗ್ಗಿದನು.

ಅರ್ಥ:
ನಂದನ: ಮಗ; ಕೈದು: ಆಯುಧ, ಶಸ್ತ್ರ; ಭಾಸ್ಕರ: ರವಿ; ಮೂದಲಿಸು: ಹಂಗಿಸು; ಗಾಗು: ಮುಟ್ಟು;

ಪದವಿಂಗಡಣೆ:
ವಿಂದನ್+ಅನುವಿಂದನನು +ಚಿತ್ರಕ
ನಂದನನ +ಚಿತ್ರಾಂಗದನ +ಸಾ
ನಂದ +ದುಸ್ಸಹ +ಶಂಕುಕರ್ಣ +ಸುದೀರ್ಘಬಾಹುಕನ
ನಂದ+ ಚಿತ್ರಾಂಬಕನ+ ಕುಂತಿಯ
ನಂದನನು +ಬರಿಕೈದು+ ಭಾಸ್ಕರ
ನಂದನ+ಅಶ್ವತ್ಥಾಮರನು +ಮೂದಲಿಸಿ +ತಾಗಿದನು

ಅಚ್ಚರಿ:
(೧) ನಂದ ಪದದ ಬಳಕೆ – ೨-೬ ಸಾಲಿನ ಮೊದಲ ಪದ
(೨) ಚಿತ್ರಕನಂದನ, ಕುಂತಿಯ ನಂದನ, ಭಾಸ್ಕರ ನಂದನ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ