ಪದ್ಯ ೧೪: ದ್ರೋಣರು ಭೀಮನಿಗೆ ಯಾವ ಮಾರ್ಗ ಸೂಚಿಸಿದರು?

ಆದರೆಲವೋ ಭೀಮ ಪಾರ್ಥನ
ಹಾದಿಯಲಿ ಗಮಿಸುವರೆ ಸಾತ್ಯಕಿ
ಹೋದವೊಲು ನೀನೆಮಗೆ ವಂದಿಸಿ ಮಾರ್ಗವನು ಪಡೆದು
ಹೋದಡೊಪ್ಪುವುದಲ್ಲದೇ ಬಿರು
ಸಾದಡಹುದೇ ಬೀಳು ಚರಣಕೆ
ಕಾದುವರೆ ಹಿಡಿ ಧನುವನೆಂದನು ದ್ರೋಣನನಿಲಜನ (ದ್ರೋಣ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಾಗದರೆ ಎಲವೋ ಭೀಮ, ಅರ್ಜುನನ ಬಳಿಗೆ ಈಗಾಗಲೇ ಸಾತ್ಯಕಿ ಹೋಗಿದ್ದಾನೆ ಅವನು ನನಗೆ ನಮಸ್ಕರಿಸಿ ದಾರಿ ಪಡೆದ ರೀತಿ ನೀನು ಸಹ ನನಗೆ ನಮಸ್ಕರಿಸು ಆಗ ನಿನಗ ದಾರಿ ಸಿಗುತ್ತದೆ, ಬಿರುಸಿನ ಮಾತು ಒರಟು ನಡೆಗಳಿಂದ ನಿನ್ನ ಕೆಲಸವಾಗದು, ನನ್ನ ಕಾಲಿಗೆ ಶರಣಾಗತನಾಗಿ ಬೀಳು, ವ್ಯೂಹದೊಳಕ್ಕೆ ಹೋಗು, ಇಲ್ಲವೋ ಯುದ್ಧಬೇಕಾದರೆ ಧನುಸ್ಸನ್ನು ಹಿಡಿ ಎಂದು ದ್ರೋಣರು ನುಡಿದರು.

ಅರ್ಥ:
ಹಾದಿ: ಮಾರ್ಗ; ಗಮಿಸು: ನಡೆ, ಚಲಿಸು; ಹೋಗು: ತೆರಳು; ವಂದಿಸು: ನಮಸ್ಕರಿಸು; ಮಾರ್ಗ: ದಾರಿ; ಪಡೆ: ದೊರಕು; ಒಪ್ಪು: ಸರಿಯಾದುದು; ಬಿಉಸು: ವೇಗ; ಬೀಳು: ಎರಗು; ಚರಣ: ಪಾದ; ಕಾದು: ಹೋರಾಡು; ಹಿಡಿ: ಗ್ರಹಿಸು; ಧನು: ಬಿಲ್ಲು; ಅನಿಲಜ: ವಾಯುಪುತ್ರ;

ಪದವಿಂಗಡಣೆ:
ಆದರ್+ಎಲವೋ +ಭೀಮ +ಪಾರ್ಥನ
ಹಾದಿಯಲಿ +ಗಮಿಸುವರೆ+ ಸಾತ್ಯಕಿ
ಹೋದವೊಲು +ನೀನೆಮಗೆ +ವಂದಿಸಿ +ಮಾರ್ಗವನು +ಪಡೆದು
ಹೋದಡ್+ಒಪ್ಪುವುದ್+ಅಲ್ಲದೇ +ಬಿರು
ಸಾದಡ್+ಅಹುದೇ +ಬೀಳು +ಚರಣಕೆ
ಕಾದುವರೆ +ಹಿಡಿ +ಧನುವನ್+ಎಂದನು +ದ್ರೋಣನ್+ಅನಿಲಜನ

ಅಚ್ಚರಿ:
(೧) ಭೀಮ, ಅನಿಲಜ – ಭೀಮನನ್ನು ಕರೆದ ಪರಿ
(೨) ವಂದಿಸು, ಬೀಳು ಚರಣಕೆ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ