ಪದ್ಯ ೧೨: ಸಾತ್ಯಕಿಯು ಯುದ್ಧವನ್ನು ಹೇಗೆ ನಡೆಸಿದನು?

ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸೈಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ (ದ್ರೋಣ ಪರ್ವ, ೧೧ ಸಂಧಿ, ೧೨ ಪದ್ಯ
)

ತಾತ್ಪರ್ಯ:
ಅವರೆಲ್ಲರೂ ಹಿಡಿದ ಬಾಣಗಳನ್ನು ಸಾತ್ಯಕಿಯು ತುಂಡುಮಾಡಿದನು. ಅನೇಕ ರಾಜರ ಮೇಲೆ ಬಾಣಗಳನ್ನು ಬಿಟ್ಟು ಮಾಂಸಖಂಡವನ್ನು ಹೊರಗೆಡಹಿದನು. ಸಾತ್ಯಕಿಯೊಡನೆ ಯುದ್ಧಕ್ಕಿಳಿದ ಅನೇಕ ರಾಜರು ದೇವತೆಗಳ ವಿಮಾನವನ್ನೇರಿ ಸ್ವರ್ಗಕ್ಕೆ ಹೋದರು.

ಅರ್ಥ:
ಕಡಿ: ಸೀಳು; ಅನಿಬರ: ಅಷ್ಟುಜನ; ಕೈ: ಹಸ್ತ; ಕೋಲು: ಬಾಣ; ಅಡಗು: ಅವಿತುಕೊಳ್ಳು; ಅನೇಕ: ಬಹಳ; ಭೂಪ: ರಾಜ; ಗಡಣ: ಗುಂಪು; ಘಾಡಿಸು: ವ್ಯಾಪಿಸು; ಅಂಬು: ಬಾಣ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಬವರ: ಯುದ್ಧ; ಹಿಡಿ: ಗ್ರಹಿಸು; ಭಟ: ಸೈನಿಕ; ಅಮರ: ದೇವ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ಅಡರು: ಮೇಲಕ್ಕೆ ಹತ್ತು; ಕೊಂದು: ಕೊಲ್ಲು, ಸಾಯಿಸು; ಅಹಿತ: ವೈರಿ; ಮೋಹರ: ಯುದ್ಧ;

ಪದವಿಂಗಡಣೆ:
ಕಡಿದನ್+ಅನಿಬರ +ಕೈಯ +ಕೋಲ್ಗಳನ್
ಅಡಗುದರ್+ಇದನ್+ಅನೇಕ+ಭೂಪರ
ಗಡಣವನು +ಘಾಡಿಸಿದನ್+ಅಂಬಿನ +ಸರಿಯನ್+ಉರವಣಿಸಿ
ಕಡಗಿ +ಸಾತ್ಯಕಿಯೊಡನೆ +ಬವರವ
ಹಿಡಿದ +ಭಟರ್+ಅಮರರ +ವಿಮಾನವನ್
ಅಡರುತಿದ್ದರು +ಕೊಂದನ್+ಅತಿಬಳನ್+ಅಹಿತ+ಮೋಹರವ

ಅಚ್ಚರಿ:
(೧) ಸತ್ತರು ಎಂದು ಹೇಳಲು – ಅಮರರ ವಿಮಾನವನಡರುತಿದ್ದರು

ನಿಮ್ಮ ಟಿಪ್ಪಣಿ ಬರೆಯಿರಿ