ಪದ್ಯ ೩೩: ಕುದುರೆಗಳ ಲಗಾಮನ್ನು ಯಾರು ಸರಿಪಡಿಸಿದರು?

ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ (ದ್ರೋಣ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ನೀರು ತುಂಬಿಸಿದ ಕೊಳದ ದಡದಲ್ಲಿ ಬಾಣಗಳಿಂದ ಒಂದು ಚಪ್ಪರವನ್ನು ಕಟ್ಟಿದನು. ಅರ್ಜುನನ ಸತ್ವಾತಿಶಯವನ್ನು ಹೊಗಳುತ್ತಾ ಶ್ರೀಕೃಷ್ಣನು ಕುದುರೆಗಳ ನೊಗವನ್ನು ಕಳಚಿ ಕಡಿವಾಣವನ್ನಿಳಿಸಿ, ಬೇರೆಯ ಲಗಾಮುಗಲನ್ನು ಕಟ್ಟಿ ಹಿಡಿಯಲು, ಕುದುರೆಗಳು ಎಡಬಲಕ್ಕೆ ಸ್ವತಮ್ತ್ರವಾಗಿ ತಿರುಗಾಡಿದವು.

ಅರ್ಥ:
ಕೊಳ: ಸರೋವರ; ತಡಿ: ದಡ, ತೀರ; ಹೂಡು: ಸಿದ್ಧಗೊಳ್ಳು; ಶರ: ಬಾಣ; ಚಪ್ಪರ: ಚಾವಣಿ, ಮೇಲ್ಕಟ್ಟು; ಬಲುಹು: ಬಲ, ಶಕ್ತಿ; ಕಂಡು: ನೋಡು; ಅಸುರಾರಿ: ಕೃಷ್ಣ; ಮೆಚ್ಚು: ಹೊಗಳು; ಅಡಿಗಡಿಗೆ: ಮತ್ತೆ ಮತ್ತೆ; ಹೊಗಳು: ಪ್ರಶಂಶಿಸು; ಕಳಚು: ಬೇರ್ಪಡಿಸು; ನೊಗ: ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ತೆಗೆ: ಹೊರತರು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಇಳುಹಿ: ಕೆಳಗಿಳಿಸು; ಪಿಡಿ: ಗ್ರಹಿಸು; ಪಾಡಿ: ನಾಡು, ಪ್ರಾಂತ್ಯ ; ಐದು: ಬಂದು ಸೇರು; ಮರಳು: ಹಿಂದಿರುಗು; ಎಡಬಲ: ಅಕ್ಕಪಕ್ಕ;

ಪದವಿಂಗಡಣೆ:
ಕೊಳನ +ತಡಿಯಲಿ +ಹೂಡಿದನು +ಶರ
ವಳಯದಲಿ +ಚಪ್ಪರವನ್+ಆತನ
ಬಲುಹ +ಕಂಡ್+ಅಸುರಾರಿ +ಮೆಚ್ಚಿದನ್+ಅಡಿಗಡಿಗೆ +ಹೊಗಳಿ
ಕಳಚಿ +ನೊಗನನು +ತೆಗೆದು +ಕಬ್ಬಿಯ
ನಿಳುಹಿ+ ಪಡಿ+ವಾಘೆಗಳ +ಸರಿದನು
ಕೊಳಿಸಿ+ ಪಿಡಿಯಲು +ಪಾಡಿಗೈದವು +ಮರಳಿದ್+ಎಡಬಲಕೆ

ಅಚ್ಚರಿ:
(೧) ಅಡಿಗಡಿ, ಎಡಬಲ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ