ಪದ್ಯ ೪೭: ಕೃಷ್ಣನು ಅರ್ಜುನನಿಗೆ ಯಾವ ರೀತಿ ಗುರಗಳನ್ನು ಗೆಲ್ಲಲು ಹೇಳಿದನು?

ಸರಳ ಸವರಿ ಮಹಾಸ್ತ್ರಚಯದಲಿ
ನರನನೆಚ್ಚನು ನಮ್ಮ ಲಾಗಿನ
ಧುರವು ತಾನಿದು ದಿಟ್ಟನಹೆಯೋ ಪಾರ್ಥ ಲೇಸೆನುತ
ಸರಳು ಸುರಿಯಲು ಕೃಷ್ಣ ಪಾರ್ಥನ
ಕೆರಳಿದನು ಫಡ ಮರುಳೆ ಗುಣದಲಿ
ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ (ದ್ರೋಣ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳನ್ನು ದ್ರೋಣನು ಕಡಿದು ಹಾಕಿ, ಬಾಣಗಳಿಂದ ಅವನಿಗೆ ಹೊಡೆದು, ಅರ್ಜುನ, ನೀನು ದಿಟ್ಟ, ಆದರೆ ಈ ಯುದ್ಧವು ನಮಗೆ ಗಿಟ್ಟುತ್ತದೆ ಎಂದನು. ಆಗ ಕೃಷ್ಣನು ಅರ್ಜುನನ ಮೇಲೆ ಕೆರಳಿ, ಅರ್ಜುನ ನೀನು ಯುದ್ಧಮಾಡಿ ಗುರುವನ್ನು ಗೆಲ್ಲುವೆಯಾ? ಹುಚ್ಚೇ ವಿನಯದಿಂದ ಅವರನ್ನು ಗೆಲ್ಲು ಎಂದು ಹೇಳಿದನು.

ಅರ್ಥ:
ಸರಳು: ಬಾಣ; ಸವರು: ನಾಶಗೊಳಿಸು; ಅಸ್ತ್ರ: ಶಸ್ತ್ರ; ಚಯ: ಸಮೂಹ; ಎಚ್ಚು: ಬಾಣ ಪ್ರಯೋಗ ಮಾಡು; ಲಾಗು: ನೆಗೆಯುವಿಕೆ, ಲಂಘನ; ಧುರ: ಯುದ್ಧ, ಕಾಳಗ; ದಿಟ್ಟ: ಧೈರ್ಯಶಾಲಿ, ಸಾಹಸಿ; ಲೇಸು: ಒಳಿತು; ಸುರಿ: ವರ್ಷಿಸು; ಕೆರಳು: ಕೋಪಗೊಳ್ಳು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮರುಳ: ಮೂಢ; ಗುಣ:ನಡತೆ, ಸ್ವಭಾವ; ಗುರು: ಆಚಾರ್ಯ; ಗೆಲುವು: ಜಯ; ಕಾದು: ಹೋರಾಡು;

ಪದವಿಂಗಡಣೆ:
ಸರಳ +ಸವರಿ +ಮಹಾಸ್ತ್ರ+ಚಯದಲಿ
ನರನನ್+ಎಚ್ಚನು +ನಮ್ಮ +ಲಾಗಿನ
ಧುರವು +ತಾನಿದು +ದಿಟ್ಟನಹೆಯೋ +ಪಾರ್ಥ +ಲೇಸೆನುತ
ಸರಳು +ಸುರಿಯಲು +ಕೃಷ್ಣ +ಪಾರ್ಥನ
ಕೆರಳಿದನು +ಫಡ +ಮರುಳೆ +ಗುಣದಲಿ
ಗುರುವ +ಗೆಲುವುದ +ಮಾಡು +ಗೆಲುವಾ+ ಕಾದಿ+ ನೀನೆಂದ

ಅಚ್ಚರಿ:
(೧) ಗುರುಗಳನ್ನು ಗೆಲ್ಲಲು ಕೃಷ್ಣನ ಸಲಹೆ – ಗುಣದಲಿ ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ

ನಿಮ್ಮ ಟಿಪ್ಪಣಿ ಬರೆಯಿರಿ