ಪದ್ಯ ೪೪: ಅರ್ಜುನನು ದ್ರೋಣರಿಗೆ ಏನುತ್ತರವನ್ನು ನೀಡಿದನು?

ಎಂಬಡಿದಿರುತ್ತರವಲೇ ಗರ
ಳಾಂಬುಜದ ಪರಿಮಳಕೆ ಗರುಡನು
ತುಂಬಿಯಾದರೆ ಸೇರುವುದಲೇ ಸಾಕದಂತಿರಲಿ
ಅಂಬುಗಳಿಗಡೆದೆರಹ ಕುಡಿ ನೀ
ವೆಂಬ ನುಡಿಗಂಜುವೆನು ಸೈಂಧವ
ನೆಂಬವನ ತೋರಿಸಿರೆಯೆಂದನು ನಗುತ ಕಲಿಪಾರ್ಥ (ದ್ರೋಣ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಆಚಾರ್ಯರೇ, ನಾನು ಮಾತನಾಡಿದರೆ ನಿಮ್ಮ ವಿರೋಧವಾಗಿ ಆಡಿದಂತಾಗುತ್ತದೆ. ವಿಷದ ಕಮಲಕ್ಕೆ ಗರುಡನೇ ದುಂಬಿಯಾದರೆ ಏನಾಗುತ್ತದೆ. ನನ್ನ ಬಾಣಗಳಿಗೆ ದಾರಿಯನ್ನು ಕೊಡಿ, ನೀವಾಡಿದ ಮಾತಿಗೆ ಹೆದರುತ್ತೇನೆ, ಸೈಂಧವನನ್ನು ತೋರಿಸಿರಿ, ಕೊಲ್ಲುತ್ತೇನೆ, ಹೀಗೆಂದು ಅರ್ಜುನನು ನಗುತ್ತಾ ದ್ರೋಣರಿಗೆ ಉತ್ತರಿಸಿದನು.

ಅರ್ಥ:
ಇದಿರು: ಎದುರು; ಉತ್ತರ: ಜವಾಬು; ಗರಳ: ವಿಷ; ಅಂಜುಜ: ಕಮಲ; ಪರಿಮಳ: ಸುವಾಸನೆ; ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ದುಂಬಿ: ಭ್ರಮರ; ಸೇರು: ಜೊತೆಗೂಡು; ಸಾಕು: ನಿಲ್ಲಿಸು; ಅಂಬು: ಬಾಣ; ಕುಡಿ: ಪಾನಮಾಡು; ನುಡಿ: ಮಾತು; ಅಂಜು: ಹೆದರು; ತೋರಿಸು: ಕಾಣಿಸು; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಎಂಬಡ್+ಇದಿರ್+ಉತ್ತರವಲೇ +ಗರಳ
ಅಂಬುಜದ +ಪರಿಮಳಕೆ +ಗರುಡನು
ತುಂಬಿಯಾದರೆ +ಸೇರುವುದಲೇ +ಸಾಕ್+ಅದಂತಿರಲಿ
ಅಂಬುಗಳಿಗ್+ಅಡೆದೆರಹ+ ಕುಡಿ +ನೀ
ವೆಂಬ +ನುಡಿಗ್+ಅಂಜುವೆನು +ಸೈಂಧವ
ನೆಂಬ್+ಅವನ +ತೋರಿಸಿರ್+ಎಂದನು +ನಗುತ +ಕಲಿ+ಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರಳಾಂಬುಜದ ಪರಿಮಳಕೆ ಗರುಡನು ತುಂಬಿಯಾದರೆ ಸೇರುವುದಲೇ

ನಿಮ್ಮ ಟಿಪ್ಪಣಿ ಬರೆಯಿರಿ