ಪದ್ಯ ೧೯: ಕಾಂಭೋಜರಾಜರನ್ನು ದ್ರೋಣರು ಎಲ್ಲಿ ನಿಲ್ಲಿಸಿದರು?

ಹಿಂದೆ ಯೋಜನವೈದರಳವಿಯೊ
ಳಂದು ಚಕ್ರವ್ಯೂಹವನು ನಲ
ವಿಂದ ಬಲಿದನು ನಿಲಿಸಿದನು ಕಾಂಭೋಜಭೂಪತಿಯ
ವಿಂದನನುವಿಂದನನು ದಕ್ಷಿಣ
ವೃಂದ ಸಮಸಪ್ತಕರ ಬಲವನು
ಸಂದಣಿಸಿದರು ಹತ್ತು ಸಾವಿರ ನೃಪರ ಗಡಣದಲಿ (ದ್ರೋಣ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಕರವ್ಯೂಹದ ಹಿಮ್ದೆ ಐದು ಯೋಜನ ವಿಸ್ತಾರದಲ್ಲಿ ಚಕ್ರವ್ಯೂಹವನ್ನು ಬಲವಾಗಿ ರಚಿಸಿ ಅಲ್ಲಿ ಕಾಂಬೋಜ ರಾಜ, ವಿಂದ, ಅನುವಿಂದ, ದಾಕ್ಷಿಣಾತ್ಯ ರಾಜರು, ಸಮಸಪ್ತಕರ ಸೈನ್ಯದ ಕೆಲಭಾಗವನ್ನು ನಿಲ್ಲಿಸಿದನು. ಹತ್ತು ಸಹಸ್ರ ರಾಜರು ಅದರಲ್ಲಿದ್ದರು.

ಅರ್ಥ:
ಹಿಂದೆ: ಹಿಂಭಾಗ; ಯೋಜನ: ಅಳತೆಯ ಪ್ರಮಾಣ; ಅಳವಿ: ಶಕ್ತಿ; ನಲವು: ಸಂತೋಷ; ಬಲಿ: ಗಟ್ಟಿ; ನಿಲಿಸು: ತಡೆ; ಭೂಪತಿ: ರಾಜ; ವೃಂದ: ಗುಂಪು; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವರು; ಬಲ: ಶಕ್ತಿ; ಸಂದಣಿಸು: ಗುಂಪುಗೂಡಿಸು; ಸಾವಿರ: ಸಹಸ್ರ; ನೃಪ: ರಾಜ; ಗಡಣ: ಕೂಡಿಸುವಿಕೆ;

ಪದವಿಂಗಡಣೆ:
ಹಿಂದೆ +ಯೋಜನವ್+ಐದರ್+ಅಳವಿಯೊಳ್
ಅಂದು +ಚಕ್ರವ್ಯೂಹವನು +ನಲ
ವಿಂದ +ಬಲಿದನು +ನಿಲಿಸಿದನು +ಕಾಂಭೋಜ+ಭೂಪತಿಯ
ವಿಂದನನ್+ಅನುವಿಂದನನು +ದಕ್ಷಿಣ
ವೃಂದ +ಸಮಸಪ್ತಕರ +ಬಲವನು
ಸಂದಣಿಸಿದರು +ಹತ್ತು +ಸಾವಿರ +ನೃಪರ+ ಗಡಣದಲಿ

ಅಚ್ಚರಿ:
(೧) ನಲವಿಂದ, ವಿಂದ, ಅನುವಿಂದ, ವೃಂದ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ