ಪದ್ಯ ೯: ಶಿವನು ಅರ್ಜುನನಿಗೆ ಯಾವ ಅಸ್ತ್ರದ ಪ್ರಯೋಗವನ್ನು ತೋರಿಸಿದನು?

ಬಳಿಕ ತಿರುವಿಟ್ಟಾಗಲಸ್ತ್ರವ
ಸೆಳೆದು ಬಿಲುವಿದ್ಯಾಚಮತ್ಕೃತಿ
ಯಳವ ತೋರಿದಡಾಗಳೀಶನ ಹೊರೆಗೆ ನಾನೈದಿ
ನಿಲೆ ತದೀಯಾಸ್ತ್ರಪ್ರಯೋಗದ
ಬಲುಹನೀಕ್ಷಿಸೆ ತೆಗೆವ ಬೆಡಗನು
ಕಲಿಸೆ ಪಾಶುಪತಾಸ್ತ್ರವೆನಗಾಯ್ತಲ್ಲಿ ವಶವರ್ತಿ (ದ್ರೋಣ ಪರ್ವ, ೯ ಸಂಧಿ, ೯ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ನಾನದಕ್ಕೆ ಹೆದೆಯೇರಿಸಿ ಬಿಲ್ವಿದ್ಯೆಯ ಚಮತ್ಕಾರವನ್ನು ತೋರಿಸಿ ಹರನ ಬಳಿಗೆ ಹೋಗಿ ನಿಂತೆನು. ಅವನು ಪಾಶುಪತಾಸ್ತ್ರ ಪ್ರಯೋಗ ಮಾದುವಾಗ ಅದನ್ನು ಹೇಗೆ ತೆಗೆಯಬೇಕೆಂದು ತೋರಿಸಿದನು. ಪಾಶುಪತಾಸ್ತ್ರವು ನನ್ನ ವಶವಾಯಿತು.

ಅರ್ಥ:
ಬಳಿಕ: ನಂತರ; ತಿರುವು: ತಿರುಗಿಸು; ಅಸ್ತ್ರ: ಶಸ್ತ್ರ, ಆಯುಧ; ಸೆಳೆ: ಜಗ್ಗು, ಎಳೆ; ಬಿಲು: ಬಿಲ್ಲು, ಚಾಪ; ವಿದ್ಯೆ: ಜ್ಞಾನ; ಚಮತ್ಕೃತಿ: ವಿಸ್ಮಯ; ಅಳವು: ಶಕ್ತಿ; ತೋರು: ಪ್ರದರ್ಶಿಸು; ಹೊರೆ: ರಕ್ಷಣೆ, ಆಶ್ರಯ; ಪ್ರಯೋಗ: ನಿದರ್ಶನ, ದೃಷ್ಟಾಂತ; ಬಲುಹು: ಶಕ್ತಿ; ಈಕ್ಷಿಸು: ನೋಡು; ತೆಗೆ: ಹೊರತರು; ಬೆಡಗು: ಅಂದ, ಸೊಬಗು; ಕಲಿಸು: ತಿಳಿಸು; ವಶ: ಅಧೀನ;

ಪದವಿಂಗಡಣೆ:
ಬಳಿಕ +ತಿರುವಿಟ್ಟಾಗಲ್+ಅಸ್ತ್ರವ
ಸೆಳೆದು +ಬಿಲುವಿದ್ಯಾ+ಚಮತ್ಕೃತಿ
ಯಳವ +ತೋರಿದಡ್+ಆಗಳ್+ಈಶನ +ಹೊರೆಗೆ +ನಾನೈದಿ
ನಿಲೆ +ತದೀಯಾಸ್ತ್ರ+ಪ್ರಯೋಗದ
ಬಲುಹನ್+ಈಕ್ಷಿಸೆ +ತೆಗೆವ+ ಬೆಡಗನು
ಕಲಿಸೆ +ಪಾಶುಪತಾಸ್ತ್ರವ್+ಎನಗಾಯ್ತಲ್ಲಿ +ವಶವರ್ತಿ

ನಿಮ್ಮ ಟಿಪ್ಪಣಿ ಬರೆಯಿರಿ