ಪದ್ಯ ೪೭: ಕೌರವರೇಕೆ ತಮ್ಮ ತಮ್ಮಲ್ಲೇ ಕಾದಾಡಿದರು?

ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು
ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ
ಧುರದ ಭರ ಮಿಗೆ ಕೊಂಡು ಬೆದರ
ಳ್ಳಿರಿಯೆ ಬೆರಗಿನ ಬಳಿಯಲೊದಗಿ
ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ (ದ್ರೋಣ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ರಾವುತರು ಆನೆಗಳನ್ನು , ಜೋದರು ಕುದುರೆಗಳನ್ನು, ಕಾಲಾಳುಗಳು ರಥಗಳನ್ನು ಹತ್ತಿದರು. ಮಹಾರಥರು ಈಟಿ, ಸಬಳ ಕಠಾರಿ ಉಬ್ಬಣಗಳನ್ನು ಹಿಡಿದು ಕಾಲಾಳುಗಳಾದರು. ಯುದ್ಧವು ಸಮೀಪಿಸಿ ಉಗ್ರವಾಗಿದೆಯೆಂದು ಭಯಗೊಂಡು ತಮ್ಮ ಪಕ್ಕದಲ್ಲಿದ್ದವರೇ ಪಾಂಡವ ಯೋಧರೆಂದು ತಿಳಿದು ತಮ್ಮ ತಮ್ಮಲ್ಲೇ ಕಾದಾಡಿದರು.

ಅರ್ಥ:
ಕರಿ: ಆನೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಜೋಧ: ಆನೆಮೇಲೆ ಕೂತು ಯುದ್ಧಮಾಡುವವ; ತುರಗ: ಅಶ್ವ; ಕಾಲಾಳು: ಸೈನಿಕ; ರಥ: ಬಂಡಿ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಸಬಳ: ಈಟಿ; ಕಠಾರಿ: ಬಾಕು, ಚೂರಿ, ಕತ್ತಿ; ಉಬ್ಬಣ: ಹೆಚ್ಚು, ಅಧಿಕ; ಧುರ: ಯುದ್ಧ, ಕಾಳಗ; ಭರ: ರಭಸ; ಮಿಗೆ: ಮತ್ತು,ಅಧಿಕವಾಗಿ; ಬೆದರು: ಹೆದರು; ಅಳ್ಳಿರಿ: ಚುಚ್ಚು; ಬೆರಗು: ಆಶ್ಚರ್ಯಪಡು, ವಿಸ್ಮಯ; ಬಳಿ: ಹತ್ತಿರ; ಒದಗು: ಲಭ್ಯ, ದೊರೆತುದು; ಅರರೆ: ಓಹೋ; ಹೊಯ್ದಾಡು: ಹೋರಾಡು;

ಪದವಿಂಗಡಣೆ:
ಕರಿಗಳನು+ ರಾವುತರು +ಜೋಧರು
ತುರಗವನು +ಕಾಲಾಳು +ರಥವನು
ವರ+ಮಹಾರಥರ್+ಈಟಿ +ಸಬಳ +ಕಠಾರಿ+ಉಬ್ಬಣವ
ಧುರದ +ಭರ +ಮಿಗೆ +ಕೊಂಡು +ಬೆದರ್
ಅಳ್ಳಿರಿಯೆ +ಬೆರಗಿನ +ಬಳಿಯಲ್+ಒದಗಿತ್ತ್
ಅರರೆ +ಪಾಂಡವರೆನುತ+ ಹೊಯ್ದಾಡಿದರು +ತಮ್ಮೊಳಗೆ

ಅಚ್ಚರಿ:
(೧) ಕೌರವರಲ್ಲಿನ ಗೊಂದಲವನ್ನು ಸೂಚಿಸುವ ಪರಿ – ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ

ನಿಮ್ಮ ಟಿಪ್ಪಣಿ ಬರೆಯಿರಿ