ಪದ್ಯ ೭: ಚತುರಂಗ ಸೇನೆಯು ಯಾರನ್ನು ಉರುಳಿಸಿದರು?

ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ ಬಣಗುಗಳ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ (ದ್ರೋಣ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಬಿಸಿಯುಸಿರು ಮೂಗಿನಲ್ಲಿ ಉರಿಯಂತೆ ಹೊರಬರುತ್ತಿದೆ. ದೊರೆ ಸ್ಥಿರವಾಗಿದ್ಧಾನೆ, ಬೀಡನ್ನು ಬೆದರಿಸಿ ದೋಚುತ್ತಿರುವವರನ್ನು ಬಡಿದು ಹಾಕಿ ಎಂದು ಮಂತ್ರಿಗಲು ಆಜ್ಞೆ ಮಾಡಲು ಚತುರಂಗ ಸೇನೆಯು ಹೊರಟು ಗೊಂದಲ ಮಾಡುತ್ತಿದ್ದವರನ್ನು ಶೂಲದಿಂದ ತಿವಿದು ಉರುಳಿಸಿದರು.

ಅರ್ಥ:
ಉರಿ: ಬೆಂಕಿ; ಚೂಣಿ: ಮುಂದಿನ ಸಾಲು, ಮುಂಭಾಗ; ಉಸುರು: ಪ್ರಾಣ, ಹೇಳು; ಮೂಗು: ನಾಸಿಕ; ಉರವಣಿಸು: ಆತುರಿಸು; ಧರಣಿಪತಿ: ರಾಜ; ಸ್ಥಿರ: ಶಾಶ್ವತವಾದ; ಹೊಯ್: ಹೊಡೆ; ಹೊಳಲು: ಪ್ರಕಾಶ, ನಗರ; ಬೆದರಿಸು: ಹೆದರಿಸು; ಸುಲಿ: ಬಿಡಿಸು, ತೆಗೆ; ಬಣಗು: ಕೀಳು, ಅಲ್ಪ; ಹರಿ: ಸೀಳು; ಹೊರವಂಟು: ತೆರಳು; ಹೊಯ್ದು: ಹೊಡೆ; ತುರಗ: ಅಶ್ವ; ಗಜಘಟೆ: ಆನೆಗಳ ಗುಂಪು; ಬೀದಿ: ಮಾರ್ಗ; ನೆರವಿ: ಗುಂಪು; ಅಸಿ: ಕತ್ತಿ, ಖಡ್ಗ; ಮನ್ನೆಯ: ಮೆಚ್ಚಿನ; ಸೆಣಸು: ಹೋರಾಡು; ಶೂಲ: ಈಟಿ, ಶಿವನ ತ್ರಿಶೂಲ;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರು +ಮೂಗಿನಲ್
ಉರವಣಿಸುತಿದೆ +ಧರಣಿಪತಿ +ಸು
ಸ್ಥಿರನು +ಹೊಯ್ +ಹೊಯ್ +ಹೊಳಲ +ಬೆದರಿಸಿ +ಸುಲಿವ +ಬಣಗುಗಳ
ಹರಿಯೆನಲು +ಹೊರವಂಟು +ಹೊಯ್ದರು
ತುರಗ+ ಗಜಘಟೆ +ಬೀದಿವರಿದವು
ನೆರವಿದೊಳ್+ಅಸಿನ +ಮನ್ನೆಯರ +ಸೆಣಸಿದರು +ಶೂಲದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಿಯೆನಲು ಹೊರವಂಟು ಹೊಯ್ದರು

ನಿಮ್ಮ ಟಿಪ್ಪಣಿ ಬರೆಯಿರಿ