ಪದ್ಯ ೨೧: ದ್ರೋಣನು ಯುದ್ಧಕ್ಕೆ ಯಾರನ್ನು ಬರಹೇಳಿದನು?

ಮೇಳವದಲೆನ್ನಾನೆಗಳ ಬರ
ಹೇಳು ಸುಭಟರೊಳಗ್ಗಳರ ಬರ
ಹೇಳು ಬಿಂಕಕೆ ಮೆರೆವ ಭೀಮಾರ್ಜುನರ ಬರಹೇಳು
ಲೋಲುಪತೆಯವನಿಯಲಿಹರೆ ಬರ
ಹೇಳು ಯಮನಂದನನಿಂದಿನ
ಕಾಳೆಗಕ್ಕೆಂದಿತ್ತ ಭಟ್ಟರನಟ್ಟಿದನು ದ್ರೋಣ (ದ್ರೋಣ ಪರ್ವ, ೪ ಸಂಧಿ, ೨೧ ಪದ್ಯ
)

ತಾತ್ಪರ್ಯ:
ದ್ರೋಣನು ಭಟ್ಟರನ್ನು ಕರೆದು, ನನ್ನ ಪರಾಕ್ರಮಿಳನ್ನು ಯುದ್ಧಕ್ಕೆ ಬರಲು ಹೇಳು, ವೀರರಲ್ಲಿ ಮಹಾವೀರರೆಂದು ಗರ್ವದಿಂದ ಬೀಗುವ ಭೀಮಾರ್ಜುನರನ್ನು ಯುದ್ಧಕ್ಕೆ ಬರಹೇಳು, ಭೂಮಿಯನ್ನಾಳುವ ಬಯಕೆಯಿದ್ದರೆ ಇಂದಿನ ಯುದ್ಧಕ್ಕೆ ಬಾ ಎಂದು ಧರ್ಮಜನನ್ನು ಬರಹೇಳು ಎಂದು ದ್ರೋಣನು ತಿಳಿಸಿದನು.

ಅರ್ಥ:
ಮೇಳ: ಗುಂಪು; ಆನೆ: ಗಜ, ಪರಾಕ್ರಮಿ; ಬರಹೇಳು: ಆಗಮಿಸು; ಸುಭಟ: ಪರಾಕ್ರಮಿ; ಅಗ್ಗ: ಶ್ರೇಷ್ಠ; ಬಿಂಕ: ಗರ್ವ, ಜಂಬ; ಮೆರೆ: ಹೊಳೆ, ಪ್ರಕಾಶಿಸು, ಒಪ್ಪು; ಲೋಲುಪ: ಅತಿಯಾಸೆಯುಳ್ಳವನು; ಅವನಿ: ಭೂಮಿ; ಇಹರು: ಇರುವ, ಜೀವಿಸು; ನಂದನ: ಮಗ; ಯಮ: ಕಾಲ; ಕಾಳೆಗ: ಯುದ್ಧ; ಭಟ್ಟ: ಸೈನಿಕ; ಅಟ್ಟು: ಹಿಂಬಾಲಿಸು;

ಪದವಿಂಗಡಣೆ:
ಮೇಳವದಲ್+ಎನ್ನಾನೆಗಳ +ಬರ
ಹೇಳು+ ಸುಭಟರೊಳ್+ಅಗ್ಗಳರ +ಬರ
ಹೇಳು +ಬಿಂಕಕೆ +ಮೆರೆವ +ಭೀಮಾರ್ಜುನರ +ಬರಹೇಳು
ಲೋಲುಪತೆ+ಅವನಿಯಲ್+ಇಹರೆ +ಬರ
ಹೇಳು +ಯಮನಂದನನ್+ಇಂದಿನ
ಕಾಳೆಗಕ್ಕೆಂದಿತ್ತ +ಭಟ್ಟರನ್+ಅಟ್ಟಿದನು +ದ್ರೋಣ

ಅಚ್ಚರಿ:
(೧) ಸುಭಟ, ಎನ್ನಾನೆ – ಸಾಮ್ಯಾರ್ಥಪದ

ನಿಮ್ಮ ಟಿಪ್ಪಣಿ ಬರೆಯಿರಿ