ಪದ್ಯ ೮೦: ಪಾಂಡವರು ಹೇಗೆ ಪಾಳೆಯಕ್ಕೆ ಬಂದರು?

ತಿರುಗಿದರು ಕೌರವರು ದ್ರೋಣನ
ಬೆರಳ ಸನ್ನೆಗೆ ಸನ್ನೆಗಾಳೆಗ
ಳುರವಣಿಸಿತೆನೆ ತಂಬಟದ ನಿಸ್ಸಾಳ ರಭಸದಲಿ
ಮುರಿದರಿವರಳ್ಳಿರಿವ ಬೊಬ್ಬೆಯ
ಧರಧುರದ ಕಹಳೆಗಳ ಭೇರಿಯ
ಭರಿತ ರವದಲಿ ವೀರನಾರಾಯಣನ ಕರುಣದಲಿ (ದ್ರೋಣ ಪರ್ವ, ೩ ಸಂಧಿ, ೮೦ ಪದ್ಯ)

ತಾತ್ಪರ್ಯ:
ದ್ರೊಣನು ಸನ್ನೆ ಮಾಡಲು ಕೌರವ ಸೈನ್ಯವು ಹಿಂದೆಸರಿದು ಪಾಳೆಯಕ್ಕೆ ಹೋಯಿತು. ಇತ್ತ ಪಾಂಡವರು ಸನ್ನೆಗನುಸಾರವಾಗಿ ಕಿವಿ ಕಿವುಡಾಗುವಂತೆ ಅಬ್ಬರಿಸುತ್ತಾ, ಕಹಳೆ, ಭೇರಿಗಳ ಸದ್ದು ಮೊಳಗುತ್ತಿರಲು, ವೀರನಾರಾಯಣನ ಕರುಣೆಯಿಂದ ವಿಜಯಶಾಲಿಗಳಾಗಿ ಪಾಳೆಯಕ್ಕೆ ಬಂದರು.

ಅರ್ಥ:
ತಿರುಗು: ಚಲಿಸು; ಬೆರಳು: ಅಂಗುಲಿ; ಸನ್ನೆ: ಗುರುತು; ಕಾಳೆಗ: ಯುದ್ಧ; ಉರವಣಿಸು: ಆತುರಿಸು; ತಂಬಟ: ತಮಟೆ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ರಭಸ: ವೇಗ; ಮುರಿ: ಸೀಳು; ಅಳ್ಳಿರಿ: ನಡುಗಿಸು, ಚುಚ್ಚು; ಬೊಬ್ಬೆ: ಆರ್ಭಟ; ಧರಧುರ: ಆರ್ಭಟ, ಕೋಲಾಹಲ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ಭರಿತ: ತುಂಬಿದ; ರವ: ಶಬ್ದ; ಕರುಣ: ದಯೆ;

ಪದವಿಂಗಡಣೆ:
ತಿರುಗಿದರು +ಕೌರವರು +ದ್ರೋಣನ
ಬೆರಳ +ಸನ್ನೆಗೆ +ಸನ್ನೆ+ಕಾಳೆಗಳ್
ಉರವಣಿಸಿತ್+ಎನೆ +ತಂಬಟದ +ನಿಸ್ಸಾಳ +ರಭಸದಲಿ
ಮುರಿದರ್+ಇವರ್+ಅಳ್ಳಿರಿವ +ಬೊಬ್ಬೆಯ
ಧರಧುರದ +ಕಹಳೆಗಳ +ಭೇರಿಯ
ಭರಿತ+ ರವದಲಿ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ತಂಬಟ, ನಿಸ್ಸಾಳ, ಕಹಳೆ, ಭೇರಿ – ರಣವಾದ್ಯಗಳು

ನಿಮ್ಮ ಟಿಪ್ಪಣಿ ಬರೆಯಿರಿ