ಪದ್ಯ ೬೫: ಕೃಷ್ಣನು ಮಹಾಂಕುಶದ ಬಗ್ಗೆ ಏನು ಹೇಳಿದ?

ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ (ದ್ರೋಣ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನಾ, ನಾನು ಆಡಬಾರದು, ನಿನಗೆ ಬಿಡಿಸಿ ಹೇಳಿದರೆ ಮನಸ್ಸು ಕೆಡುತ್ತದೆ. ಹುಚ್ಚಾ, ಅದನ್ನು ನೋಡಿದರೆ ಎವೆಗಳು ಸೀದು ಹೋಗುತ್ತದೆ. ಅದನ್ನು ಗೆಲ್ಲಲು ನಿನಗೆ ಸತ್ವವಿಲ್ಲ. ಅದು ಜಗತ್ತನ್ನು ನಿಲ್ಲಿಸಬಲ್ಲದು, ಯಮನ ಬಾಯಿಗೆ ಜಗತ್ತನ್ನು ನೂಕಬಲ್ಲದು, ಇದು ಮುನಿದರೆ ಬ್ರಹ್ಮ ರುದ್ರ ಇಂದ್ರರು ಇದಿರಾಗಿ ನಿಲ್ಲಲಾರರು ಎಂದನು.

ಅರ್ಥ:
ಆಡು: ನುಡಿ; ತೊರು: ಪ್ರದರ್ಶಿಸು; ನುಡಿ: ಮಾತಾಡು; ಖೋಡಿ: ದುರುಳತನ, ನೀಚತನ; ಮರುಳ: ತಿಳಿಗೇಡಿ, ದಡ್ಡ; ಸೀವರಿಸು: ಬೇಜಾರಪಡು, ಚೀರು; ಸೀವು: ಸೀದು, ಕರಕಲಾಗು; ಅಳವಿ: ಶಕ್ತಿ; ಹೂಡು: ಅಣಿಗೊಳಿಸು; ಜಗ: ಪ್ರಪಂಚ; ಅಂತಕ: ಯಮ; ಗೂಡು: ನೆಲೆ; ಮುನಿ: ಕೋಪಗೊಳ್ಳು; ಕೈಮಾಡು: ಹೋರಾಡು; ನಿಲು: ನಿಲ್ಲು; ಅಜ: ಬ್ರಹ್ಮ; ರುದ್ರ: ಶಿವ; ಅಮರೇಂದ್ರ: ಇಂದ್ರ; ಅಮರ: ದೇವತೆ;

ಪದವಿಂಗಡಣೆ:
ಆಡಬಾರದು +ತೋರಿ +ನುಡಿದರೆ
ಖೋಡಿ +ನಿನಗಹುದ್+ಎಲೆ +ಮರುಳೆ +ನೀ
ನೋಡಲ್+ಎವೆ +ಸೀವವು +ಕಣಾ +ನಿನ್ನಳವಿನ್+ಆಯುಧವೆ
ಹೂಡಲಾಪುದು +ಜಗವನ್+ಅಂತಕ
ಗೂಡಲಾಪುದು +ಮುನಿದರಿದ +ಕೈ
ಮಾಡುವರೆ +ನಿಲಬಾರದ್+ಅಜ+ ರುದ್ರ+ಅಮರೇಂದ್ರರಿಗೆ

ಅಚ್ಚರಿ:
(೧) ಮಹಾಂಕುಶದ ಶಕ್ತಿ – ಮುನಿದರಿದ ಕೈಮಾಡುವರೆ ನಿಲಬಾರದಜರುದ್ರಾಮರೇಂದ್ರರಿಗೆ
(೨) ಗೂಡಲಾಪುದು, ಹೂಡಲಾಪುದು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ