ಪದ್ಯ ೬೦: ಮಹಾಂಕುಶಕ್ಕೆ ಯಾರು ಅಡ್ಡ ಬಂದರು?

ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು (ದ್ರೋಣ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರಾ, ಈ ಮಹ ಅಂಕುಶವು ಎಷ್ಟರದು! ಕೃಷ್ಣಭಕ್ತರು ಎಷ್ಟು ಅಪಾಯಗಳನ್ನು ತಪ್ಪಿಸಿಕೊಂಡು ಬದುಕುವುದಿಲ್ಲ ಉರಿಕೆಂಡವು ಒರಲೆಯ ಬಾಯಿಗೆ ದಕ್ಕೀತೇ? ಕಿಡಿಯ ತೆಕ್ಕೆಗಳು, ಹೊಗೆಯ ಹೊರಳಿಗಳಿಂದ ಸುತ್ತುವರಿದು ಬರುತ್ತಿದ್ದ ಆ ಮಹಾಂಕುಶಕ್ಕೆ ಅಡ್ಡಬಂದು ಶ್ರೀಕೃಷ್ಣನು ತನ್ನ ಎದೆಯನ್ನು ಚಾಚಿದನು.

ಅರ್ಥ:
ಪಾಡು: ಸ್ಥಿತಿ; ಏಸು: ಎಷ್ಟು; ಅಪಾಯ: ತೊಂದರೆ; ಒದೆ: ತುಳಿ, ಮೆಟ್ಟು; ಕಳೆ: ಬೀಡು, ತೊರೆ; ಭಕ್ತ: ಆರಾಧಕ; ಸದರ: ಸಲಿಗೆ, ಸಸಾರ; ಉರಿ: ಬೆಂಕಿ; ಕೆಂಡ: ಇಂಗಳ; ಒರಲು: ಅರಚು, ಕೂಗಿಕೊಳ್ಳು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಹೊಗೆ: ಧೂಮ; ಹೇರಾಳ: ದೊಡ್ಡ, ವಿಶೇಷ; ಬಹ: ಬಹಳ; ದಿವ್ಯ: ಶ್ರೇಷ್ಠ; ಆಯುಧ: ಶಸ್ತ್ರ; ಚಾಚು: ಹರಡು; ವಕ್ಷ: ಹೃದಯ; ಸ್ಥಳ: ಜಾಗ; ಅಸುರಾರಾತಿ: ಕೃಷ್ಣ; ಅಡಹಾಯ್ದು: ಅಡ್ಡಬಂದು; ಹಾಯ್ದು: ಹೋರಾಡು; ಹಾಯ್ದ: ಮೇಲೆಬಿದ್ದು;

ಪದವಿಂಗಡಣೆ:
ಇದರ+ ಪಾಡೇನ್+ಏ‍ಸ್+ಅಪಾಯವನ್
ಒದೆದು +ಕಳೆಯರು +ಕೃಷ್ಣ+ಭಕ್ತರು
ಸದರವೇ+ ಉರಿ+ಕೆಂಡವ್+ಒರಲೆಯ +ಬಾಯ್ಗೆ +ಭಾವಿಸಲು
ಹೊದರು+ಕಿಡಿಗಳ+ ಹೊಗೆಯ+ ಹೇರಾ
ಳದಲಿ+ ಬಹ+ ದಿವ್ಯಾಯುಧಕೆ+ ಚಾ
ಚಿದನು+ ವಕ್ಷಸ್ಥಳವನ್+ಅಸುರ+ಅರಾತಿ+ಅಡಹಾಯ್ದು

ಅಚ್ಚರಿ:
(೧) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು
(೨) ಕೃಷ್ಣನು ರಕ್ಷಿಸುವ ಪರಿ – ಹೇರಾಳದಲಿ ಬಹ ದಿವ್ಯಾಯುಧಕೆ ಚಾಚಿದನು ವಕ್ಷಸ್ಥಳವನಸುರಾರಾತಿ

ನಿಮ್ಮ ಟಿಪ್ಪಣಿ ಬರೆಯಿರಿ