ಪದ್ಯ ೮೩: ಕೌರವ ಸೈನ್ಯವೇಕೆ ತಲ್ಲಣಿಸಿತು?

ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ (ದ್ರೋಣ ಪರ್ವ, ೨ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಜಸೈನ್ಯವು ಮಾಯವಾಗಿ ಹೋಯಿತು, ಅದರ ಮಾತೇಕೆ? ವಂಗರಾಜನ ಬಾಯಲ್ಲಿ ಗದೆಯನ್ನು ತುರುಕಿದನು. ಉಳಿದ ನಾಲ್ವರನ್ನು ಸಾಯಬಡಿದನು. ಕೌರವನ ಮೇಲೆ ಆಕ್ರಮಣ ಮಾಡಿದನು. ಸಮಸ್ತ ಕುರುಸೈನ್ಯವೂ ತಲ್ಲಣಿಸಿತು.

ಅರ್ಥ:
ಹೋಯಿತು: ಗಮಿಸು; ಮಾತು: ವಾಣಿ; ಗಜದಳ: ಆನೆಯ ಸೈನ್ಯ; ಮಾಯ: ಕಣ್ಣಿಗೆ ಕಾಣದಿರು; ಭೂಪ: ರಾಜ; ಬೆಟ್ಟು: ಕಡಿ, ಕತ್ತರಿಸು; ಗದೆ: ಮುದ್ಗರ; ಮಿಕ್ಕು: ಉಳಿದ; ಸಾಯು: ಸಾಯಿಸು; ಬಡಿ: ಹೊಡೆ; ಮಂದೆ: ಎದುರು; ರಾಯ: ರಾಜ; ತಾಗು: ಮುಟ್ಟು; ಆಯ: ಪರಿಮಿತಿ; ಬಂದು: ಆಗಮಿಸು; ಸಕಲ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಹೋಯಿತಾ +ಮಾತೇಕೆ +ಗಜದಳ
ಮಾಯವಾದುದು+ ವಂಗ+ಭೂಪನ
ಬಾಯೊಳಗೆ +ಬೆಟ್ಟಿದನು +ಗದೆಯನು +ಮಿಕ್ಕ +ನಾಲ್ವರನು
ಸಾಯ +ಬಡಿದನು +ಮುಂದೆ+ ಕೌರವ
ರಾಯನನು+ ತಾಗಿದನು +ಭೀಮನದ್
ಆಯ +ಬಂದುದು +ಸಕಲ +ಕುರು +ತಳತಂತ್ರ +ತಲ್ಲಣಿಸೆ

ಅಚ್ಚರಿ:
(೧) ಭೀಮನ ಪರಾಕ್ರಮ – ಗಜದಳ ಮಾಯವಾದುದು, ವಂಗಭೂಪನ ಬಾಯೊಳಗೆ ಬೆಟ್ಟಿದನು ಗದೆಯನು

ನಿಮ್ಮ ಟಿಪ್ಪಣಿ ಬರೆಯಿರಿ