ಪದ್ಯ ೭೬: ಭೀಮನನ್ನು ಯಾರು ಕೆಣಕಿದರು?

ವರವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಯಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತು
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ (ದ್ರೋಣ ಪರ್ವ, ೨ ಸಂಧಿ, ೭೬ ಪದ್ಯ)

ತಾತ್ಪರ್ಯ:
ವಿಕರ್ಣ, ಸುಲೋಚನ, ದುರ್ಮರ್ಷಣ ದುಶ್ಯಾಸನರು ಭೀಮನನ್ನು ಕೆಣಕಿ ಯುದ್ಧಾರಂಭಮಾಡಿದರು. ನುಸಿಗಳು ಒಟ್ಟಾಗಿ ಬೆಟ್ಟವನ್ನು ಕಾದುತ್ತಿವೆ, ನೋಡಿರಿ ಭಲೇ ಎಂದು ಗರ್ಜಿಸಿ ಭೀಮನೂ ನಗುತ್ತಾ ಮುಂದೆ ಬಂದನು.

ಅರ್ಥ:
ವರ: ಶ್ರೇಷ್ಠ; ಸಂಗರ: ಯುದ್ಧ; ಕೆಣಕು: ರೇಗಿಸು; ಅನಿಲ: ವಾಯು; ಸುತ: ಮಗ; ನೃಪ: ರಾಜ; ಹರಿಬ: ಕೆಲಸ, ಕಾರ್ಯ; ನೆರೆ: ಗುಂಪು; ನುಸಿ: ಹುಡಿ, ಸಣ್ಣಪುಟ್ಟ, ನೊರಜು; ಗಿರಿ: ಬೆಟ್ಟ; ಕಾಡು: ಹಿಂಸಿಸು, ಪೀಡಿಸು; ಸರಿ: ಸಮಾನ, ಸದೃಶ; ನೋಡು: ವೀಕ್ಷಿಸು; ಪೂತ: ಪವಿತ್ರ; ಉಬ್ಬರಿಸು: ಗರ್ಜಿಸು; ಕೈದೋರು: ಶಕ್ತಿ ಪ್ರದರ್ಶನ ಮಾಡು; ಕಲಿ: ಶೂರ; ಪವಮಾನ: ಗಾಳಿ, ವಾಯು; ಸುತ: ಮಗ; ನಗು: ಹರ್ಷಿಸು;

ಪದವಿಂಗಡಣೆ:
ವರ+ವಿಕರ್ಣ +ಸುಲೋಚನನು +ದು
ರ್ಮರುಷಣನು +ದುಶ್ಯಾಸನನು +ಸಂ
ಗರವ+ ಕೆಣಕಿದರ್+ಅನಿಲಸುತನೊಳು +ನೃಪನ +ಹರಿಬದಲಿ
ನೆರೆದ +ನುಸಿಗಳು +ಗಿರಿಯ +ಕಾಡುವ
ಸರಿಯ +ನೋಡೈ +ಪೂತುರೆನುತ್
ಉಬ್ಬರಿಸಿ +ಕೈದೋರಿದನು +ಕಲಿ +ಪವಮಾನಸುತ +ನಗುತ

ಅಚ್ಚರಿ:
(೧) ಅನಿಲಸುತ, ಪವಮಾನಸುತ – ಭೀಮನನ್ನು ಕರೆದ ಪರಿ
(೨) ಉಪಮಾನದ ಪ್ರಯೋಗ – ನೆರೆದ ನುಸಿಗಳು ಗಿರಿಯ ಕಾಡುವಸರಿಯ ನೋಡೈ

ನಿಮ್ಮ ಟಿಪ್ಪಣಿ ಬರೆಯಿರಿ