ಪದ್ಯ ೩೮: ದ್ರೋಣನು ಯುಧಿಷ್ಠಿರನಿಗೆ ಏನು ಹೇಳಿದನು?

ಬಲದ ಬರಿಕೈದೆವು ಯುಧಿಷ್ಠಿರ
ಬಿಲುದುಡುಕು ಸಾಕೋಡಿ ಬದುಕುವ
ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ
ಅಳಿದರಮರರಿಗೊಡೆಯನಹೆ ಮೇ
ಣುಳಿದಡವನೀಪಾಲನಹೆ ಯೀ
ಕಲಹವಿಹಪರಕೊಳ್ಳಿತೆಂದುರವಣಿಸಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರ, ನಿನ್ನ ಸೈನ್ಯವನ್ನು ನಿರ್ನಾಮ ಮಾಡಿದ್ದಾಯಿತು, ಇನ್ನು ನೀನು ಬಿಲ್ಲು ಹಿಡಿ, ಬದುಕಲು ಓಡಿಹೋಗುವ ಹೇಡಿತನ ಕ್ಷತ್ರಿಯರಿಗೆ ಹೆಮ್ಮೆಯನ್ನು ತರುವುದಿಲ್ಲ, ಗೆದ್ದರೆ ನೀನು ಭೂಮಿಯಲ್ಲಿ ರಾಜನಾಗುವೆ, ಸತ್ತರೆ ಸ್ವರ್ಗಾಧಿಪತಿಯಾಗುವೆ, ಯುದ್ಧ ಮಾಡುವುದು ಇಹಕ್ಕೂ ಪರಕ್ಕೂ ಒಳ್ಳೆಯದು ಎನ್ನುತ್ತಾ ದ್ರೋಣನು ಗರ್ಜಿಸಿದನು.

ಅರ್ಥ:
ಬಲ: ಶಕ್ತಿ, ಸೈನ್ಯ; ಬರಿಕೈ: ಏನು ಇಲ್ಲದ ಸ್ಥಿತಿ; ಕೈದು: ಆಯುಧ, ಶಸ್ತ್ರ; ಬಿಲು: ಬಿಲ್ಲು, ಚಾಪ; ಓಡು: ಪಲಾಯನ; ಬದುಕು: ಜೀವಿಸು; ಹುಲು: ಕ್ಷುಲ್ಲಕ; ಪರೆ: ಹರಡು, ವ್ಯಾಪಿಸು; ಹೆಮ್ಮೆ: ಅಭಿಮಾನ; ಮಕ್ಕಳು: ಸುತರು; ಅಳಿ: ನಾಶ; ಅಮರ: ದೇವತೆ; ಒಡೆಯ: ದೊರೆ; ಮೇಣ್: ಅಥವ; ಉಳಿ: ಜೀವಿಸು; ಅವನೀಪಾಲ: ರಾಜ; ಕಲಹ: ಯುದ್ಧ; ಇಹಪರಕೆ: ಈ ಲೋಕ ಮತ್ತು ಪರಲೋಕ; ಒಳ್ಳಿತು: ಒಳ್ಳೆಯದು; ಉರವಣಿಸು: ಉತ್ಸಾಹದಿಂದಿರು, ಆತುರಿಸು;

ಪದವಿಂಗಡಣೆ:
ಬಲದ +ಬರಿಕೈದೆವು+ ಯುಧಿಷ್ಠಿರ
ಬಿಲುದುಡುಕು +ಸಾಕ್+ಓಡಿ +ಬದುಕುವ
ಹುಲು +ಪರೆಯತನ+ ಹೆಮ್ಮೆಯೇ+ ಕ್ಷತ್ರಿಯರ +ಮಕ್ಕಳಿಗೆ
ಅಳಿದರ್+ಅಮರರಿಗ್+ಒಡೆಯನಹೆ +ಮೇಣ್
ಉಳಿದಡ್+ಅವನೀಪಾಲನಹೆ+ ಈ
ಕಲಹವ್+ಇಹಪರಕ್+ಒಳ್ಳಿತೆಂತ್+ಉರವಣಿಸಿದನು+ ದ್ರೋಣ

ಅಚ್ಚರಿ:
(೧) ಕ್ಷತ್ರಿಯರ ಹೆಮ್ಮೆ – ಸಾಕೋಡಿ ಬದುಕುವ ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ

ನಿಮ್ಮ ಟಿಪ್ಪಣಿ ಬರೆಯಿರಿ