ಪದ್ಯ ೪೩: ಸೂರ್ಯೋದಯವು ಹೇಗೆ ಕಂಡಿತು?

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ (ದ್ರೋಣ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾತ್ರಿಯಲ್ಲಿ ಚಂದ್ರನು ರಾಜ್ಯಭಾರ ಮಾಡುತ್ತಿದ್ದನು. ಅವನು ಹೋಗಲು ಅರಾಜಕತೆಯುಂಟಾಯಿತು. ಕುಮುದಗಳು ಬಾಗಿಲುಗಳು ಮುಚ್ಚಿದವು. ದುಂಬಿಗಳು ಮಕರಂದದ ಸಿರಿವಂತರಾದ ಕಮಲಗಳ ಅರಮನೆಗಳನ್ನು ಮುತ್ತಿದವು. ಆಕಾಶವನ್ನು ಸೂರ್ಯರಶ್ಮಿಗಳು ತುಂಬಿದವು. ಜನರ ಕಣ್ಣುಗಳನ್ನು ಮುಚ್ಚಿದ್ದ ರೆಪ್ಪೆಗಳು ತೆರೆದವು. ಚಕ್ರವಾಕ ಪಕ್ಷಿಗಳ ಸೆರೆಯನ್ನು ಬಿಡಿಸಿದರು.

ಅರ್ಥ:
ಜಗ: ಪ್ರಪಂಚ; ಅರಾಜಕ: ಅವ್ಯವಸ್ಥೆ; ಕುಮುದ: ಬಿಳಿಯ ನೈದಿಲೆ, ನೈದಿಲೆ; ಆಳಿ: ಸಮೂಹ; ಬಾಗಿಲು: ದ್ವಾರ; ಹೂಡು: ಅಣಿಗೊಳಿಸು; ಸೂರು: ಧ್ವನಿ, ಉಲಿ, ಸ್ವರ; ಕವಿ: ಆವರಿಸು; ದುಂಬಿ: ಭ್ರಮರ; ಸಿರಿ: ಸಂಪತ್ತು; ಅರಮನೆ: ರಾಜರ ಆಲಯ; ಉಗಿ: ಹೊರಹಾಕು; ಅಂಬರ: ಆಗಸ; ಮಯೂಖ: ಕಿರಣ, ರಶ್ಮಿ; ಆಳಿ: ಗುಂಪು; ಭುವನ: ಭೂಮಿ; ಜನ: ಮನುಷ್ಯ; ಕಂಗಳು: ಕಣ್ಣು; ತಗಹು: ಅಡ್ಡಿ, ತಡೆ; ತೆಗೆ: ಹೊರಹಾಕು; ಸೆರೆ: ಬಂಧನ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಜಗವ್+ಅರಾಜಕವಾಯ್ತು+ ಕುಮುದಾ
ಳಿಗಳ +ಬಾಗಿಲು +ಹೂಡಿದವು +ಸೂ
ರೆಗರು+ ಕವಿದುದು +ತುಂಬಿಗಳು +ಸಿರಿವಂತರ್+ಅರಮನೆಯ
ಉಗಿದವ್+ಅಂಬರವನು +ಮಯೂಖಾ
ಳಿಗಳು +ಭುವನದ +ಜನದ+ ಕಂಗಳ
ತಗಹು+ ತೆಗೆದುದು +ಸೆರೆಯ +ಬಿಟ್ಟರು +ಜಕ್ಕವಕ್ಕಿಗಳ

ಅಚ್ಚರಿ:
(೧) ಸೂರ್ಯೋದಯವನ್ನು ಅತ್ಯಂತ ಸೃಜನಾತ್ಮಕತೆಯಲ್ಲಿ ವರ್ಣಿಸಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ