ಪದ್ಯ ೩೬: ಆಸ್ಥಾನದವರು ಕರ್ಣನನ್ನೇಕೆ ಹೊಗಳಿದರು?

ಜಾಗು ಜಾಗುರೆ ಕರ್ಣ ಪರರ ಗು
ಣಾಗಮನ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ (ದ್ರೋಣ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳನ್ನು ಕೇಳಿ ಆಸ್ಥಾನದಲ್ಲಿದ್ದವರೆಲ್ಲರೂ, ಬೆರಳನ್ನೂ ಕಿರೀಟವನ್ನೂ ತೂಗಿ, ಭಲೇ ಕರ್ಣ ಪರರ ಗುಣವನ್ನು ಹೊಗಳುವ ನೀನು ಈ ದ್ವಾಪರಯುದದವನಲ್ಲ ಎಂದು ಹೊಗಳಿದರು. ಆಸ್ಥಾನವು ಅವರ ಕಿರೀಟದ ರತ್ನಗಳ ಬೆಳಕು, ಮಾತಿನ ಲಹರಿಗಳಿಂದ ಸಾಗರದಂತೆ ಕಾಣಿಸಿತು.

ಅರ್ಥ:
ಜಾಗು: ಭಲೇ; ಪರರ: ಅನ್ಯರ; ಗುಣಾಗಮ: ಗುಣವನ್ನು ಹೊಗಳುವವ; ಗುಣ: ನಡತೆ; ಪತಿಕರಿಸು: ಅನುಗ್ರಹಿಸು; ಈಗಳಿನ: ಇಂದಿನ; ಯುಗ: ಸಮಯದ ಬಹು ದೀರ್ಘವಾದ ಕಾಲ; ಮಝ: ಭಲೇ; ಪೂತು: ಕೋಂಡಾಟದ ಮಾಗು; ಭಾಪು: ಭಲೇ; ತೂಗು: ಅಲ್ಲಾಡಿಸು; ಬೆರಳು: ಅಂಗುಲಿ; ಮಕುಟ: ಕಿರೀಟ; ಅಹಿ: ಹಾವು; ಗರುವ: ಹಿರಿಯ; ಭಟ: ಸೈನಿಕ; ಉಲಿ: ಕೂಗು; ಲಹರಿ: ಅಲೆ; ಸಾಗರ: ಸಮುದ್ರ; ಸೌರಂಭ: ಸಡಗರ; ಮಸಗು: ಹರಡು; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಜಾಗು +ಜಾಗುರೆ +ಕರ್ಣ +ಪರರ +ಗು
ಣಾಗಮನ +ಪತಿಕರಿಸಿ +ನುಡಿವವನ್
ಈ+ಗಳಿನ +ಯುಗದಾತನೇ +ಮಝ +ಪೂತು +ಭಾಪೆನುತ
ತೂಗು+ಬೆರಳಿನ +ಮಕುಟದೊಲಹಿನೊಳ್
ಆ +ಗರುವ +ಭಟರುಲಿಯೆ +ಲಹರಿಯ
ಸಾಗರದ +ಸೌರಂಭದಂತಿರೆ +ಮಸಗಿತ್+ಆಸ್ಥಾನ

ಅಚ್ಚರಿ:
(೧) ರೂಪಕದ ಪ್ರಯೋಗ – ತೂಗುವೆರಳಿನ ಮಕುಟದೊಲಹಿನೊಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ

ನಿಮ್ಮ ಟಿಪ್ಪಣಿ ಬರೆಯಿರಿ