ಪದ್ಯ ೧೨: ದುರ್ಯೋಧನನ ಸ್ಥಿತಿ ಹೇಗಿತ್ತು?

ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ (ದ್ರೋಣ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶತ್ರುಗಳು ಎದುರಿಸಲಾಗದಂತಹ ಭೀಮಾರ್ಜುನರ ಪರಾಕ್ರಮವನ್ನು ನೆನೆಯುತ್ತಾ, ಕಠಾರಿಯ ಹಿಡಿಕೆಯ ಮೇಲೆ ಗಲ್ಲವನ್ನಿಟ್ಟು, ಕಿರೀಟವನ್ನು ತೂಗುತ್ತಾ, ಕಂಬನಿಗಲು ಅವಿರಳವಾಗಿ ದಲದಳನೆ ಸುರಿಯುತ್ತಿರಲು, ಶೋಕಾಗ್ನಿಯು ಸುಡುತ್ತಿರುವ ಮನಸ್ಸಿನಿಂದ ಕೌರವನು ಓಲಗನ್ನಿತ್ತನು.

ಅರ್ಥ:
ಗಾಹು: ಮೋಸ, ವಂಚನೆ; ಕೊಳ್ಳು: ತೆಗೆದುಕೋ; ಸಾಹಸ: ಪರಾಕ್ರಮ; ಎಣಿಸು: ಲೆಕ್ಕಮಾಡು; ಕಠಾರಿ: ಚೂರಿ, ಕತ್ತಿ; ಮೋಹ:ಭ್ರಾಂತಿ, ಭ್ರಮೆ; ಗಲ್ಲ: ಕೆನ್ನೆ; ಮಕುಟ: ಕಿರೀಟ; ಅಹುಗಳು: ಸರಿಯೆಂದು ತಲೆಯನ್ನು ತೂಗಾಡು; ಉಹೆ: ಎಣಿಕೆ, ಅಂದಾಜು; ತನಿ: ಹೆಚ್ಚಾಗು; ಮೋಹರ: ಯುದ್ಧ; ಘನ: ಶ್ರೇಷ್ಠ; ಶೋಕ: ದುಃಖ; ವಹ್ನಿ: ಬೆಂಕಿ; ಮೇಹುಗಾಡು: ಮೇಯುವ ಕಾಡು; ಮನ: ಮನಸ್ಸು; ಓಲಗ: ದರ್ಬಾರು;

ಪದವಿಂಗಡಣೆ:
ಗಾಹು +ಕೊಳ್ಳದ +ಭೀಮ +ಪಾರ್ಥರ
ಸಾಹಸವನ್+ಎಣಿಸುತ +ಕಠಾರಿಯ
ಮೋಹಳದ +ಮೇಲಿಟ್ಟ +ಗಲ್ಲದ +ಮಕುಟದ್+ಒಲಹುಗಳ
ಊಹೆದೆಗಹಿನ +ಕಂಬನಿಯ +ತನಿ
ಮೋಹರದ+ ಘನ +ಶೋಕ+ವಹ್ನಿಯ
ಮೇಹುಗಾಡಿನ+ ಮನದ+ ಕೌರವನಿತ್ತನ್+ಓಲಗವ

ಅಚ್ಚರಿ:
(೧) ದುರ್ಯೋಧನನ ಚಿತ್ರಣ – ಕಠಾರಿಯ ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ

ನಿಮ್ಮ ಟಿಪ್ಪಣಿ ಬರೆಯಿರಿ