ಪದ್ಯ ೩೯: ಭೀಷ್ಮನು ಧರ್ಮಜನಿಗೆ ಏನೆಂದು ಆಶೀರ್ವದಿಸಿದನು?

ಮುರಹರನ ಮಾತಹುದು ಸಾಕಿ
ನ್ನರಸ ಧರ್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಹೇಳಿದ ಮಾತು ಸರಿಯಾಗಿದೆ, ರಾಜ ಧರ್ಮಜ ನೀನಿನ್ನು ತೆರಳು, ದ್ರುಪದನೇ ಮೊದಲಾದವರಿಗೆ ಹೊರಡಲು ಅಪ್ಪಣೆಕೊಟ್ಟಿದ್ದೇನೆ, ಅಪ್ಪ ಅರ್ಜುನ ಇನ್ನು ಪಾಳೆಯಕ್ಕೆ ಹೋಗು, ಭೂಮಿಯ ಆಶೆಯಿಂದ ನನ್ನಲ್ಲಿ ತಪ್ಪಿದೆವೆಂದು ಎಂದೂ ಬಗೆಯ ಬೇಡಿರಿ, ನೀವು ಜಯಶಾಲಿಗಳಾಗಿರಿ ಎಂದು ಹರಸಿದನು.

ಅರ್ಥ:
ಮುರಹರ: ಕೃಷ್ಣ; ಮಾತು: ನುಡಿ; ಸಾಕು: ನಿಲ್ಲಿಸು; ಅರಸ: ರಾಜ; ಧರ್ಮಜ: ಯುಧಿಷ್ಠಿರ; ಹೋಗು: ತೆರಳು; ಆದಿ: ಮುಂತಾದ; ಮರಳು: ಹಿಂದಿರುಗು; ತಂದೆ: ಪಿತ; ಪಾಳಯ: ಸೀಮೆ; ಧರೆ: ಭೂಮಿ; ಲೋಲುಪ್ತಿ: ಸುಖ, ಸಂತೋಷ; ಸಲೆ: ಸದಾ, ಸರಿಯಾಗಿ; ಕಾತರಿಸು: ತವಕಗೊಳ್ಳು; ತಪ್ಪು: ಸುಳ್ಳಾಗು; ಧರಧುರ: ಆರ್ಭಟ, ಕೋಲಾಹಲ; ನೆನೆ: ಜ್ಞಾಪಿಸು; ವಿಜಯಿ: ಗೆಲುವು; ಅಹುದು: ಸರಿಯಾದುದು;

ಪದವಿಂಗಡಣೆ:
ಮುರಹರನ +ಮಾತ್+ಅಹುದು +ಸಾಕಿನ್ನ್
ಅರಸ +ಧರ್ಮಜ +ಹೋಗು +ದ್ರುಪದ
ಆದ್ಯರಿಗೆ+ ನೇಮವು +ಪಾರ್ಥ +ಮರಳೈ +ತಂದೆ +ಪಾಳಯಕೆ
ಧರೆಯ +ಲೋಲುಪ್ತಿಯಲಿ +ಸಲೆ +ಕಾ
ತರಿಸಿ +ತಪ್ಪಿದೆವ್+ಎಮ್ಮೊಳ್+ಎಂಬೀ
ಧರಧುರವ +ನೆನೆಯದಿರಿ +ವಿಜಯಿಗಳಾಗಿ +ನೀವೆಂದ

ಅಚ್ಚರಿ:
(೧) ಹೋಗು, ಮರಳು – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ