ಪದ್ಯ ೨೦: ಧರ್ಮಜನು ಹೇಗೆ ದುಃಖಿಸಿದನು?

ಏನ ನೆನೆದಾವುದನೊಡರಿದೆ
ನೇನ ಹೇಳುವೆನೆನ್ನ ಪುಣ್ಯದ
ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ
ನಾನದಾವುದು ಧರ್ಮತತ್ವ ನಿ
ಧಾನವೆಂದರಿಯದೆ ಕೃತಾಂತಂ
ಗಾನು ಹಂಗಿಗನಾದೆನೆಂದೊರಲಿದನು ಯಮಸೂನು (ಭೀಷ್ಮ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಏನನ್ನು ಆಲೋಚಿಸಿ, ಏನನ್ನು ಮಾಡಿದೆ, ನನ್ನ ಪುಣ್ಯದ ಹಾನಿಯನ್ನು ಏನೆಂದು ಹೇಳಲಿ, ನಿಮ್ಮ ಶ್ರೀಪಾದಗಳಿಗೆ ನಾನು ತಪ್ಪನ್ನು ಬಗೆದೆ, ಧರ್ಮ ತತ್ತ್ವದ ಮಾರ್ಗವಾವುದೆಂದು ತಿಳಿಯದೆ ನಾನು ಯಮಧರ್ಮನ ಹಂಗಿಗೊಳಗಾದೆ ಎಂದು ಧರ್ಮಜನು ದುಃಖಿಸಿದನು.

ಅರ್ಥ:
ನೆನೆ: ಜ್ಞಾಪಿಸು; ಒಡರ್ಚು: ಉಂಟು ಮಾಡು; ಹೇಳು: ತಿಳಿಸು; ಪುಣ್ಯ: ಸದಾಚಾರ; ಹಾನಿ: ನಾಶ; ತಪ್ಪು: ಸೈರಿಯಲ್ಲದ; ಸಿರಿಪದ: ಶ್ರೇಷ್ಠವಾದ ಪಾದ; ಧರ್ಮ: ಧಾರಣೆ ಮಾಡಿದುದು, ನಿಯಮ; ನಿಧಾನ: ಸಾವಕಾಶ; ತತ್ವ: ಸಿದ್ಧಾಂತ, ನಿಯಮ; ಅರಿ: ತಿಳಿ; ಕೃತಾಂತ: ಯಮ; ಹಂಗು: ದಾಕ್ಷಿಣ್ಯ, ಆಭಾರ; ಒರಲು: ಅರಚು;
ಸೂನು: ಮಗ;

ಪದವಿಂಗಡಣೆ:
ಏನ +ನೆನೆದ್+ಆವುದನ್+ಒಡರಿದೆನ್
ಏನ+ ಹೇಳುವೆನ್+ಎನ್ನ+ ಪುಣ್ಯದ
ಹಾನಿಯನು +ಕೈತಪ್ಪ +ನೆನೆದೆನು +ನಿಮ್ಮ +ಸಿರಿಪದಕೆ
ನಾನ್+ಅದಾವುದು+ ಧರ್ಮತತ್ವ +ನಿ
ಧಾನವೆಂದ್+ಅರಿಯದೆ +ಕೃತಾಂತಂಗ್
ಆನು +ಹಂಗಿಗನ್+ಆದೆನ್+ಎಂದ್+ಒರಲಿದನು +ಯಮಸೂನು

ಅಚ್ಚರಿ:
(೧) ಧರ್ಮಜನು ದುಃಖಿಸುವ ಪರಿ – ಪುಣ್ಯದ ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ

ನಿಮ್ಮ ಟಿಪ್ಪಣಿ ಬರೆಯಿರಿ