ಒಡಲ ಜಡಿದವು ರೋಮ ರೋಮದೊ
ಳಡಸಿದಂಬುಗಳಂಗ ವೇದನೆ
ತೊಡಕಿತುಬ್ಬರಿಸಿದುದು ಢಗೆ ಗೋನಾಳಿ ನೀರ್ದೆಗೆಯೆ
ನುಡಿಯಲಾರೆನು ಮಕ್ಕಳಿರನೀ
ರಡಸಿದೆನು ಹಿರಿದಾಗಿಯೆನೆ ನಡ
ನಡುಗಿ ದುರ್ಯೋಧನನು ದೂತರ ಕರೆದು ನೇಮಿಸಿದ (ಭೀಷ್ಮ ಪರ್ವ, ೧೦ ಸಂಧಿ, ೨೪ ಪದ್ಯ)
ತಾತ್ಪರ್ಯ:
ಭೀಷ್ಮರು ಬಾಣದ ಹಾಸಿಗೆಯ ಮೇಲೆ ಮಲಗಿರಲು ಅವರ ದೇಹ ಬಹಳ ನೋವನ್ನನುಭವಿಸಿತು. ಮಕ್ಕಳೇ ರೋಮರೋಮಗಳಲ್ಲಿ ನೆಟ್ಟ ಬಾಣಗಳು ದೇಹವನ್ನು ಘಾಸಿಗೊಳಿಸುತ್ತಿವೆ. ನೋವು ಹೆಚ್ಚಾಗಿ ಅಂಗಳು ಒಣಗಿ ಹೋಗಿ ನಾನು ಮಾತನಾಡಲಾರೆ, ಬಹಳ ಬಾಯಾರಿಸಿದೆ ಎಂದು ಹೇಳಲು, ದುರ್ಯೋಧನನು ನಡನಡುಗಿ ಧೂತರನ್ನು ಅಟ್ಟಿ ನೀರನ್ನು ತರಲು ಹೇಳಿದನು.
ಅರ್ಥ:
ಒಡಲು: ದೇಹ; ಜಡಿ: ಭಾರದಿಂದ ಕೆಳಕ್ಕೆ ಜೋಲು; ರೋಮ: ಕೂದಲು; ಅಡಸು: ಬಿಗಿಯಾಗಿ ಒತ್ತು, ತುರುಕು; ಅಂಬು: ಬಾಣ; ಅಂಗ: ದೇಹದ ಭಾಗ; ವೇದನೆ: ನೋವು; ತೊಡಕು: ಸಿಕ್ಕು, ಗೋಜು; ಉಬ್ಬರ: ಅತಿಶಯ, ಹೆಚ್ಚಳ; ಢಗೆ: ಕಾವು, ದಗೆ; ಗೋನಾಳಿ: ಕುತ್ತಿಗೆಯ ನಾಳ; ನೀರ್ದೆಗೆ: ಬಾಯಾರಿಕೆ; ನುಡಿ: ಮಾತಾಡು; ಮಕ್ಕಳು: ಸುತರು, ಕುಮಾರ; ನೀರು: ಜಲ; ನೀರಡಸಿ: ನೀರೊದಗಿಸು; ಹಿರಿ: ದೊಡ್ಡವ; ನಡುಗು: ಹೆದರು, ಅಲುಗಾಡು; ದೂತ: ಸೇವಕ; ಕರೆ: ಬರೆಮಾಡು; ನೇಮಿಸು: ಆಜ್ಞಾಪಿಸು;
ಪದವಿಂಗಡಣೆ:
ಒಡಲ +ಜಡಿದವು +ರೋಮ +ರೋಮದೊಳ್
ಅಡಸಿದ್+ಅಂಬುಗಳ್+ಅಂಗ+ ವೇದನೆ
ತೊಡಕಿತ್+ಉಬ್ಬರಿಸಿದುದು +ಢಗೆ+ ಗೋನಾಳಿ +ನೀರ್ದೆಗೆಯೆ
ನುಡಿಯಲಾರೆನು+ ಮಕ್ಕಳಿರ+ನೀ
ರಡಸಿದೆನು+ ಹಿರಿದಾಗಿ+ಎನೆ+ ನಡ
ನಡುಗಿ +ದುರ್ಯೋಧನನು +ದೂತರ +ಕರೆದು +ನೇಮಿಸಿದ
ಅಚ್ಚರಿ:
(೧) ಭೀಷ್ಮರ ಸ್ಥಿತಿ – ನುಡಿಯಲಾರೆನು ಮಕ್ಕಳಿರನೀರಡಸಿದೆನು ಹಿರಿದಾಗಿ