ಪದ್ಯ ೭: ಭೀಷ್ಮನು ಯಾರ ಬಾಣಗಳಿಗೆ ಹೆದರುವೆನೆಂದನು?

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿ ವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂನುವೆನರ್ಜುನನ ಶರಕೆ (ಭೀಷ್ಮ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷ್ಣುವಿನ ಕೌಮೋದಕಿ ಗದೆಯ ಹೊಡೆತವನ್ನು ಬೆರಳ ತುದಿಯಿಂದ ತಪ್ಪಿಸಬಲ್ಲೆ, ಕುಲ ಪರ್ವತಗಳು ನನ್ನ ಮೇಲೆ ಜಾರಿ ಬಿದ್ದರೂ ಉಗುರಿನ ಕೊನೆಯಿಂದ ತಡೆಯಬಲ್ಲೆ, ಆದಿ ವರಾಹನು ಅವನ ಹಲ್ಲುಗಳಿಂದ ಇರಿದರೂ, ನರಸಿಂಹನು ತನ್ನ ಉಗುರುಗಳಿಂದ ಕೆರೆದರೂ ನಾನು ಸಹಿಸಬಲ್ಲೆ, ಆದರೆ ಅರ್ಜುನನ ಬಾಣಗಳಿಗೆ ನಾನು ಹೆದರುತ್ತೇನೆ ಎಂದು ಭೀಷ್ಮರು ನುಡಿದರು.

ಅರ್ಥ:
ಹರಿ: ವಿಷ್ಣು; ಕೌಮೋದಕಿ: ವಿಷ್ಣುವಿನ ಗದೆ; ಹೊಯ್ಲು: ಹೊಡೆತ; ಆನು: ಎದುರಿಸು; ಅಖಿಲ: ಎಲ್ಲಾ; ಕುಲಗಿರಿ: ದೊಡ್ಡ ಬೆಟ್ಟ; ಜರಿ: ಸೀಳೂ; ಬೀಳು: ಕೆಳಕ್ಕೆ ಕೆಡೆ, ಕುಸಿ; ಆಪು: ಸಾಮರ್ಥ್ಯ; ನಖ: ಉಗುರು; ಕೊನೆ: ತುದಿ; ಭರ: ವೇಗ; ಆದಿ: ಮೊದಲ; ವರಾಹ: ಹಂದಿ; ದಾಡೆ: ಹಲ್ಲು; ಇರಿ: ಚುಚ್ಚು; ಕೆರೆ: ಉಗುರಿನಿಂದ ಗೀಚು, ಗೀರು; ಸೈರಿಸು: ತಾಳು; ಅಂಜು: ಹೆದರು; ಶರ: ಬಾಣ;

ಪದವಿಂಗಡಣೆ:
ಹರಿಯ +ಕೌಮೋದಕಿಯ +ಹೊಯ್ಲನು
ಬೆರಳಲ್+ಆನುವೆನ್+ಅಖಿಲ +ಕುಲಗಿರಿ
ಜರಿದು +ಬೀಳುವಡ್+ಆನಲ್+ಆಪೆನು +ನಖದ +ಕೊನೆಗಳಲಿ
ಭರದಲ್+ಆದಿ +ವರಾಹ +ದಾಡೆಯಲ್
ಇರಿದಡೆಯು +ನರಸಿಂಹ +ನಖದಲಿ
ಕೆರೆದಡೆಯು +ಸೈರಿಸುವೆನ್+ಅಂಜುವೆನ್+ಅರ್ಜುನನ +ಶರಕೆ

ಅಚ್ಚರಿ:
(೧) ಇರಿ, ಜರಿ, ಹೊಯ್ಲು, ಕೆರೆ – ಹೊಡೆತ, ನೋವನ್ನು ಸೂಚಿಸುವ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ