ಪದ್ಯ ೬: ಯಾರ ಬಾಣದ ಪೆಟ್ಟನ್ನು ಭೀಷ್ಮರು ಸಹಿಸಲಾರರು?

ಪರಶುರಾಮನ ಕೊಡಲಿಗಡಿತವ
ಧರಿಸಲಾಪೆನು ವಿಲಯ ಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಪರಶುರಾಮನ ಕೊಡಲಿಯ ಹೊಡೆತವನ್ನು ಸಹಿಸಬಲ್ಲೆ. ಪ್ರಳಯ ಭೈರವನ ಇರಿತಕ್ಕೆ ಹೆದರುವುದಿಲ್ಲ. ಸಿಡಿಲು ಬಡಿದರೆ ನನ್ನ ಕೂದಲೂ ಕೊಂಕುವುದಿಲ್ಲ. ಶಿವನ ಪಾಶುಪತಾಸ್ತ್ರವು ಮೈಯಲ್ಲಿ ರಂಧ್ರವನ್ನು ಕೊರೆದರೂ ಬೆದರುವುದಿಲ್ಲ. ಅರ್ಜುನನ ಬಾಣಗಳ ದಾಳಿಗೆ ಸಿಲುಕಿ ನೋಯುತ್ತಿದ್ದೇನೆ, ನೀವು ಬಂದು ಅವನ ಬಾಣಗಳನ್ನು ಪರಿಹರಿಸಿ ಎಂದು ಭೀಷ್ಮನು ಬೇಡಿದನು.

ಅರ್ಥ:
ಕೊಡಲಿ: ಪರಶು; ಕಡಿತ: ಕತ್ತರಿಸು; ಧರಿಸು: ಹಿಡಿ, ತೆಗೆದುಕೊಳ್ಳು; ವಿಲಯ: ನಾಶ, ಪ್ರಳಯ; ಇರಿ: ಚುಚ್ಚು; ಅಂಜು: ಹೆದರು; ಸಿಡಿಲು: ಅಶನಿ; ಹೊಡೆ: ಏಟು, ಹೊಡೆತ; ರೋಮ: ಕೂದಲು; ಕಂಪಿಸು: ಅಲುಗಾಡು; ಹರ: ಈಶ್ವರ; ಅಸ್ತ್ರ: ಶಸ್ತ್ರ; ಬಾದಣ: ತೂತು, ರಂಧ್ರ; ಒರೆ: ತಿಕ್ಕು; ಲೆಕ್ಕಿಸು: ಎಣಿಕೆಮಾಡು; ಸರಳು: ಬಾಣ; ಚೂಣಿ: ಮುಂದಿನ ಸಾಲು; ಸಿಲುಕು: ಸೆರೆಯಾದ ವಸ್ತು; ಪರಿಹರ: ನಿವಾರಣೆ;

ಪದವಿಂಗಡಣೆ:
ಪರಶುರಾಮನ +ಕೊಡಲಿ+ಕಡಿತವ
ಧರಿಸಲಾಪೆನು +ವಿಲಯ +ಭೈರವನ್
ಇರಿದಡ್+ಅಂಜೆನು +ಸಿಡಿಲು +ಹೊಡೆದರೆ +ರೋಮ +ಕಂಪಿಸದು
ಹರನ +ಪಾಶುಪತಾಸ್ತ್ರ+ ಬಾದಣಗ್
ಒರೆದರೆಯು+ ಲೆಕ್ಕಿಸೆನು+ ಪಾರ್ಥನ
ಸರಳ+ ಚೂಣಿಗೆ +ಸಿಲುಕಿದೆನು +ಪರಿಹರಿಸಿ+ ನೀವೆಂದ

ಅಚ್ಚರಿ:
(೧) ಭೀಷ್ಮನು ಬೇಡುವ ಪರಿ – ಪಾರ್ಥನ ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ

ನಿಮ್ಮ ಟಿಪ್ಪಣಿ ಬರೆಯಿರಿ