ಪದ್ಯ ೩೧: ಅರ್ಜುನನು ಭೀಷ್ಮನನ್ನು ಯಾರಿಗೆ ಹೋಲಿಸಿದನು?

ಕಟಕಿಯೇಕಿದು ಪರಶುರಾಮನ
ಪಟುತನಕೆ ಮದ್ದರೆದೆನೆಂಬೀ
ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು
ಕುಟಿಲ ಭಣಿತಯನರಿಯೆನಿದರೊಳು
ಭಟರು ನೀವಹುದೆನ್ನ ಶರ ಸಂ
ಘಟನವನು ಚಿತ್ತಯಿಸಿಯೆಂದನು ಪಾರ್ಥ ನಸುನಗುತ (ಭೀಷ್ಮ ಪರ್ವ, ೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು, ಈ ಹಂಗಿನ ಮಾತೇಕೆ, ಪರಶುರಾಮನ ಪರಾಕ್ರಮಕ್ಕೆ ಮದ್ದರೆದ ನೀವು ಶಿವನಿಗೆ ಸರಿಸಮಾನದ ಭಟರು. ನನ್ನ ಮಾತಿನಲ್ಲಿ ಕೊಂಕಿಲ್ಲ. ನಿಜಕ್ಕೂ ನೀವು ಪರಾಕ್ರಮಿಗಳು, ನನ್ನ ಶರಸಂಧಾನವನ್ನಿಷ್ಟು ಚಿತ್ತಗೊಟ್ಟು ನೋಡಿ ಎಂದು ಅರ್ಜುನನು ಹೇಳಿದನು.

ಅರ್ಥ:
ಕಟಕಿ: ಚುಚ್ಚುಮಾತು, ವ್ಯಂಗ್ಯ; ಪಟುತನ: ಸಾಮರ್ಥ್ಯ;ಮದ್ದು: ಔಷಧಿ, ಪರಿಹಾರ; ನಿಟಿಲನೇತ್ರ: ಶಿವ; ನಿಟಿಲ: ಹಣೆ; ನೇತ್ರ: ಕಣ್ಣು; ಭುಜಬಲ: ಪರಾಕ್ರಮ; ಸಮಜೋಳಿ: ಒಂದೇ ಸಮನಾದ ಜೋಡಿ; ಗಡ: ಅಲ್ಲವೆ; ತ್ವರಿತವಾಗಿ; ಕುಟಿಲ: ಮೋಸ, ವಂಚನೆ; ಭಣಿತೆ: ಮಾತು, ಹೇಳಿಕೆ; ಅರಿ: ತಿಳಿ; ಭಟ: ಸೈನಿಕ; ಶರ: ಬಾಣ; ಸಂಘಟ: ಘರ್ಷಣೆ, ಯುದ್ಧ; ಚಿತ್ತಯಿಸು: ಗಮನವಿಟ್ಟು ಕೇಳು; ನಸುನಗು: ಸಂತಸ, ಮಂದಸ್ಮಿತ;

ಪದವಿಂಗಡಣೆ:
ಕಟಕಿಯೇಕಿದು+ ಪರಶುರಾಮನ
ಪಟುತನಕೆ +ಮದ್ದರೆದೆನ್+ಎಂಬೀ
ನಿಟಿಲನೇತ್ರನ +ಭುಜಬಲಕೆ+ ಸಮಜೋಳಿ +ಗಡ +ನೀವು
ಕುಟಿಲ +ಭಣಿತಯನ್+ಅರಿಯೆನ್+ಇದರೊಳು
ಭಟರು+ ನೀವಹುದೆನ್ನ+ ಶರ +ಸಂ
ಘಟನವನು +ಚಿತ್ತಯಿಸಿ+ಎಂದನು +ಪಾರ್ಥ +ನಸುನಗುತ

ಅಚ್ಚರಿ:
(೧) ಭೀಷ್ಮನ ಪರಾಕ್ರಮವನ್ನು ವರ್ಣಿಸುವ ಪರಿ – ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು