ಪದ್ಯ ೩೦: ಭೀಷ್ಮರು ಅರ್ಜುನನಿಗೆ ಏನು ಹೇಳಿದರು?

ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಮೂದಲಿಸಲು ನಮನ್ನೇಕೆ ಆರಿಸಿದೆ, ನಾವಾದರೋ ವಯೋವೃದ್ಧರು, ನಮಗೆ ಬಿರುದು ಗಿರುದಿನ ಯಾವ ಆಸೇಯೂ ಇಲ್ಲ, ನೀವಾದರೋ ಯುವಕರು, ವೀರರು, ಯುದ್ಧದ ಭರಕ್ಕೆ ನೀವಿರುವಾಗ ನಿಮ್ಮ ಸೈನ್ಯ ನಾಯಕರಿಲ್ಲದಂತಾಗಲು ಹೇಗೆ ಸಾಧ್ಯ ಹೇಳು ಎಂದು ಭೀಷ್ಮರು ಹೇಳಿದರು.

ಅರ್ಥ:
ವೃದ್ಧ: ವಯಸ್ಸಾದ; ಬಿರುದು: ಗೌರವ ಸೂಚಕ ಪದ; ಲಾವಣಿ: ಜನಪದ ಹಾಡುಗಳ ಒಂದು ಪ್ರಕಾರ; ಜವ್ವನ: ಯೌವ್ವನ; ಭಂಟ: ವೀರ, ಪರಾಕ್ರಮಿ; ರಣ: ಯುದ್ಧಭೂಮಿ; ಧುರಭರ: ಜೋರಾದ ಯುದ್ಧ; ನಿರ್ನಾಯಕ: ನಿರ್ಣಯ ಮಾಡುವ, ನಿರ್ಧಾರ; ಸೇನಾವಳಿ: ಸೈನ್ಯ; ಮೂದಲೆ: ಹಂಗಿಸು; ಲಕ್ಷ್ಯ: ಗುರುತು;

ಪದವಿಂಗಡಣೆ:
ನಾವು +ವೃದ್ಧರು +ಬಿರುದು +ಗಿರುದಿನ
ಲಾವಣಿಗೆ +ನಮಗೇಕೆ +ಹೇಳೈ
ನೀವಲೈ +ಜವ್ವನದ +ಭಂಟರು +ರಣದ +ಧುರಭರಕೆ
ನೀವಿರಲು +ನಿರ್ನಾಯಕವೆ +ಸೇ
ನಾವಳಿ +ಮಹಾದೇವ +ಮೂದಲೆಗ್
ಆವು +ಲಕ್ಷ್ಯವೆ +ಹೇಳು +ಫಲುಗುಣ+ ಎಂದನಾ +ಭೀಷ್ಮ

ಅಚ್ಚರಿ:
(೧) ಆಡು ಪದದ ಬಳಕೆ – ಬಿರುದು ಗಿರುದು;

ಪದ್ಯ ೨೯: ಅರ್ಜುನನು ಯಾರೊಡನೆ ಯುದ್ಧಮಾಡಲು ಸಿದ್ಧನಾದನು?

ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರೆ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ (ಭೀಷ್ಮ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಲವು ಅನಾಯಕವಾಯಿತೇ? ಸಾಧಾರಣ ಸೈನ್ಯದೆದುರಿನಲ್ಲಿ ನಿಮ್ಮ ಸತ್ವ, ಕೈಚಳಕ, ಕಲಿತನ, ಬಿಲುಗಾರತನಗಲನ್ನು ತೋರಿಸಿದಿರಿ ಅಷ್ಟೇ, ನಮ್ಮೊಡನೆ ಯುದ್ಧದಲ್ಲಿ ಗೆದ್ದು ನಿಮ್ಮ ಬಿರುದನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಅರ್ಜುನನು ಭೀಷ್ಮನೊಡನೆ ಯುದ್ಧಮಾಡಲು ಸಿದ್ಧನಾದನು.

ಅರ್ಥ:
ಬಲ: ಶಕ್ತಿ, ಸೈನ್ಯ; ನಾಯಕ: ಒಡೆಯ; ಅನಾಯಕ: ನಾಯಕನಿಲ್ಲದ ಸ್ಥಿತಿ; ವೃಥಾ: ಸುಮ್ಮನೆ; ಹುಲು: ಕ್ಷುಲ್ಲಕ; ದಳ: ಸೈನ್ಯ; ಅಗ್ಗಳಿಕೆ: ಶ್ರೇಷ್ಠ; ಅಳವು: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಕಲಿ: ಶೂರ; ಬಿಲುಗಾರ: ಬಿಲ್ವಿದ್ಯಾ ಚತುರ; ಬಲಿ: ಗಟ್ಟಿ, ದೃಢ, ಶಕ್ತಿಶಾಲಿ; ಮೆಚ್ಚು: ಪ್ರಶಂಸೆ; ಬಳಿಕ: ನಂತರ; ಹಡೆ: ಸೈನ್ಯ, ದಂಡು; ಬಿರುದು: ಗೌರವ ಸೂಚಕ ಪದ; ಕೈಯಿಕ್ಕು: ಹೋರಾಡು; ಕುಮಾರ: ಮಗ;

ಪದವಿಂಗಡಣೆ:
ಬಲವ್+ಅನಾಯಕವೇ +ವೃಥಾ +ಹುಲು
ದಳದೊಳಗೆ+ ನಿಮ್ಮಗ್ಗಳಿಕೆ+ ಕೈ
ಅಳವ+ ಮನ+ಕಲಿತನದ್+ಅಳವ+ ಬಿಲುಗಾರತನದ್+ಅಳವ
ಬಲಿಯಿರೇ +ನಮ್ಮೊಡನೆ +ಮೆಚ್ಚಿಸಿ
ಬಳಿಕ+ ಹಡೆಯಿರೆ+ ಬಿರುದನ್+ಎನುತವೆ
ಫಲುಗುಣನು +ಕೈಯಿಕ್ಕಿದನು +ಗಂಗಾಕುಮಾರನಲಿ

ಅಚ್ಚರಿ:
(೧) ಅಳವ ಪದದ ಬಳಕೆ – ೩ ಸಾಲಿನಲ್ಲಿ ೩ ಬಾರಿ
(೨) ಭೀಷ್ಮನನ್ನು ಹಂಗಿಸುವ ಪರಿ – ಬಲವನಾಯಕವೇ ವೃಥಾ ಹುಲುದಳದೊಳಗೆ ನಿಮ್ಮಗ್ಗಳಿಕೆ