ಪದ್ಯ ೨೮: ಸೈನ್ಯವು ಏಕೆ ಮತ್ತೆ ಒಟ್ಟುಗೂಡಿತು?

ಮಾತು ಹಿಂಚಿತು ತೇರು ಸೇನಾ
ವ್ರಾತವನು ಹಿಂದಿಕ್ಕಿ ಗಂಗಾ
ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ
ಸೋತು ಚೆಲ್ಲಿದ ಸೇನೆ ಹರ್ಷದೊ
ಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ ಕೇಳು ಜನಮೇಜಯ ಮಹೀಪಾಲ (ಭೀಷ್ಮ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ಮಾತು ಮುಗಿಯುವುದರೊಳಗಾಗಿ ಶ್ರೀಕೃಷ್ಣನು ಅರ್ಜುನನ ರಥವನ್ನು ಭೀಷ್ಮನೆದುರಿನಲ್ಲಿ ನಿಲ್ಲಿಸಿದನು. ಆ ಮಹಾದ್ಭುತವನ್ನು ಕಂಡು, ಸೋತು ಓಡಿಹೋಗಿದ್ದ ಸೈನ್ಯವು ಮತ್ತೆ ಒಟ್ಟಾಗಿ ನಿಂತಿತು. ಇನ್ನು ಸೋಲೆಂಬ ಮಾತೆಲ್ಲಿ ಉಳಿಯಿತು.

ಅರ್ಥ:
ಮಾತು: ನುಡಿ; ಹಿಂಚು: ತಡ, ಸಾವಕಾಶ; ತೇರು: ಬಂಡಿ; ಸೇನೆ: ಸೈನ್ಯ; ವ್ರಾತ: ಗುಂಪು; ಹಿಂದೆ: ಹಿಂಬದಿ; ಗಂಗಾಜಾತ: ಗಂಗೆಯಲ್ಲಿ ಹುಟ್ಟಿದ (ಭೀಷ್ಮ); ನಿಂದು: ನಿಲ್ಲು; ಅದ್ಭುತ: ಆಶ್ಚರ್ಯ; ಸೋತು: ಪರಾಭವ; ಚೆಲ್ಲು: ಹರಡು; ಹರ್ಷ: ಸಮ್ತಸ; ನಿಂದು: ನಿಲ್ಲು; ಭಂಗ: ಮುರಿಯುವಿಕೆ; ಕೇಳು: ಆಲಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಮಾತು +ಹಿಂಚಿತು +ತೇರು +ಸೇನಾ
ವ್ರಾತವನು +ಹಿಂದಿಕ್ಕಿ +ಗಂಗಾ
ಜಾತನಿದಿರಲಿ+ ನಿಂದುದ್+ಏನೆಂಬೆನು+ ಮಹಾದ್ಭುತವ
ಸೋತು +ಚೆಲ್ಲಿದ +ಸೇನೆ +ಹರ್ಷದೊಳ್
ಆತು +ನಿಂದುದು+ ಮತ್ತೆ+ ಭಂಗದ
ಮಾತದ್+ಏತಕೆ +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ಸೈನ್ಯವು ಹುರಿದುಂಬಿದ ಪರಿ – ಸೋತು ಚೆಲ್ಲಿದ ಸೇನೆ ಹರ್ಷದೊಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ

ನಿಮ್ಮ ಟಿಪ್ಪಣಿ ಬರೆಯಿರಿ