ಪದ್ಯ ೮: ಭೀಷ್ಮರು ಯಾರನ್ನು ಎದುರಿಸಿದರು?

ಕೊಂಡುಬಹ ಬಲುನಾಯಕರ ಖತಿ
ಗೊಂಡು ದಡಿಯಲಿ ಹೊಯ್ಸಿ ಸೇನೆಯ
ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ
ಗಂಡುಗಲಿಯಭಿಮನ್ಯು ಸಾತ್ಯಕಿ
ಚಂಡಬಲ ಹೈಡೆಇಂಬರನು ಸಮ
ದಂಡಿಯಲಿ ಮೋಹರಿಸಿ ಸ್ಮರಕೆ ನಡೆದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ತನ್ನ ಮೇಲೆ ನುಗ್ಗಿದ ನಾಯಕರನ್ನು ಹಿಂದಕ್ಕೆ ದಬ್ಬಿ ಹೊಡೆದು ಸೇನೆಯು ಒಟ್ಟಾಗಿರುವಾಗಲೇ ರಾಜರನ್ನು ಮರ್ದಿಸಿ, ಅಭಿಮನ್ಯು, ಸಾತ್ಯಕಿ, ಘಟೋತ್ಕಚರನ್ನು ಸಮಯುದ್ಧದಲ್ಲಿ ಎದುರಿಸಿದನು.

ಅರ್ಥ:
ಕೊಂಡು: ತೆಗೆದು; ಬಹ: ತುಂಬ; ಬಲು: ಬಹಳ; ನಾಯಕ: ಒಡೆಯ; ಖತಿ: ಕೋಪ; ದಡಿ: ಕೋಲು, ಬಡಿಗೆ; ಹೊಯ್ಸು: ಹೊಡೆ; ಸೇನೆ: ಸೈನ್ಯ; ಹಿಂಡು: ಗುಂಪು; ಒಡೆ: ಸೀಳು; ಓಜೆ: ಶ್ರೇಣಿ, ಸಾಲು; ಹುರಿ:ನಾಶಪಡಿಸು; ಮಹೀಶ್ವರ: ರಾಜ; ಗಂಡುಗಲಿ: ಪರಾಕ್ರಮಿ; ಚಂಡಬಲ: ಪರಾಕ್ರಮಿ; ದಂಡಿ: ಶಕ್ತಿ, ಸಾಮರ್ಥ್ಯ; ಮೋಹರ: ಯುದ್ಧ; ಸಮರ: ಕಾಳಗ;

ಪದವಿಂಗಡಣೆ:
ಕೊಂಡುಬಹ+ ಬಲುನಾಯಕರ+ ಖತಿ
ಗೊಂಡು +ದಡಿಯಲಿ +ಹೊಯ್ಸಿ +ಸೇನೆಯ
ಹಿಂಡೊಡೆಯದ್+ಓಜೆಯಲಿ +ಹುರಿ+ಏರಿಸಿ+ ಮಹೀಶ್ವರರ
ಗಂಡುಗಲಿ+ಅಭಿಮನ್ಯು +ಸಾತ್ಯಕಿ
ಚಂಡಬಲ+ ಹೈಡಿಂಬರನು +ಸಮ
ದಂಡಿಯಲಿ +ಮೋಹರಿಸಿ+ ಸಮರಕೆ+ ನಡೆದನಾ+ ಭೀಷ್ಮ

ಅಚ್ಚರಿ:
(೧) ಗಂಡುಗಲಿ, ಚಂಡಬಲ – ಪರಾಕ್ರಮಿಗಳನ್ನು ವಿವರಿಸುವ ಪದ

ನಿಮ್ಮ ಟಿಪ್ಪಣಿ ಬರೆಯಿರಿ