ಪದ್ಯ ೩೨: ದ್ರೋಣನ ಪರಾಕ್ರಮವು ಎಂತಹುದು?

ಆವುದಂತರ ವನ ಕಳಭಕೈ
ರಾವತಕೆ ಮಝ ಭಾಪು ದ್ರೋಣನ
ಡಾವರಕೆ ಪಾಂಚಾಲನೈಸರವನು ಮಹಾದೇವ
ನಾವು ದ್ರುಪದನ ಕಾಣೆವಾವೆಡೆ
ಗಾ ವಿರಾಟನು ಸರಿದನೆತ್ತಲು
ತೀವಿದರು ಸೃಂಜಯರು ನೃಪ ನಾವರಿಯೆವಿದನೆಂದ (ಭೀಷ್ಮ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸಂಜಯನು ರಾಜನಿಗೆ ವಿವರಿಸುತ್ತಾ, ಕಾಣಾನೆಯ ಮರಿಯೆತ್ತ, ದೇವೇಂದ್ರನ ಐರಾವತವೆಲ್ಲಿ? ದ್ರೋಣನ ಪ್ರತಾಪದ ಮುಂದೆ ದ್ರುಪದನೆಷ್ಟರವನು. ದ್ರುಪದನು ಕಾಣಿಸಲೇ ಇಲ್ಲ. ವಿರಾಟ ಸೃಂಜಯರು ಎಲ್ಲಿಗೆ ಓಡಿದರೆಂದು ನನಗೆ ತಿಳಿಯದೆಂದು ಹೇಳಿದನು.

ಅರ್ಥ:
ಅಂತರ: ವ್ಯತ್ಯಾಸ; ವನ: ಕಾದು; ಕಳಭ: ಆನೆಮರಿ; ಐರಾವತ: ಇಂದ್ರನ ಆನೆ; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಡಾವರ: ಭಯಂಕರವಾದ; ಐಸರವ: ಎಷ್ಟರವನ; ಕಾಣು: ತೋರು; ಸರಿ: ಹೋಗು, ಗಮಿಸು; ತೀವು: ಸೇರು, ಕೂಡು; ನೃಪ: ರಾಜ; ಅರಿ: ತಿಳಿ;

ಪದವಿಂಗಡಣೆ:
ಆವುದ್+ಅಂತರ +ವನ +ಕಳಭಕ್
ಐರಾವತಕೆ +ಮಝ +ಭಾಪು +ದ್ರೋಣನ
ಡಾವರಕೆ +ಪಾಂಚಾಲನ್+ಐಸರವನು+ ಮಹಾದೇವ
ನಾವು +ದ್ರುಪದನ +ಕಾಣೆವಾವ್+ಎಡೆಗ್
ಆ+ ವಿರಾಟನು+ ಸರಿದನ್+ಎತ್ತಲು
ತೀವಿದರು +ಸೃಂಜಯರು +ನೃಪ +ನಾವರಿಯೆವ್+ಇದನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆವುದಂತರ ವನ ಕಳಭಕೈರಾವತಕೆ ಮಝ ಭಾಪು

ನಿಮ್ಮ ಟಿಪ್ಪಣಿ ಬರೆಯಿರಿ