ಪದ್ಯ ೧೫: ಸೈನಿಕರಿಗೆ ಯಾವುದು ಅಡ್ಡಿಯೊಡ್ಡಿತು?

ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ಯಾಡಿದರು ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ (ಭೀಷ್ಮ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮುಂದಿದ್ದ ಸೈನ್ಯದ ತುಕಡಿಗಳು ತಲೆಗೆ ತಲೆಯೊಡ್ಡಿ ಯಾವ ಮಿತಿಯೂ ಇಲ್ಲದ ರಭಸದಿಂದ ತಮ್ಮ ಕತ್ತುಗಳನ್ನು ಮಾರಿ ಒಡೆಯನ ಋಣವನ್ನು ಕಳೆದುಕೊಂಡರು. ಶಪಥ ಮಾಡಿ ಯುದ್ಧಕ್ಕಿಳಿದರು, ಹುರಿಯ ಮೂರು ಭಾಗಗಳು ಹೊಂದಿದಂತೆ ಯುದ್ಧದಲ್ಲಿ ಶತ್ರುಗಳೊಡನೆ ಹಾಣಾಹಾಣಿ ಕಾಳಗವನ್ನು ಮಾಡಿದರು. ಆ ಸಮರದಲ್ಲಿ ಹರಿದ ರಕ್ತ ಪ್ರವಾಹವು ಯುದ್ಧಕ್ಕೆ ಬರುವವರಿಗೆ ಅಡ್ಡಿಯಾಯಿತು.

ಅರ್ಥ:
ಚೂಣಿ: ಮುಂದಿನ ಸಾಲು, ಮುಂಭಾಗ; ತಲೆ: ಶಿರ; ಒತ್ತು: ಆಕ್ರಮಿಸು, ಮುತ್ತು, ಒತ್ತಡ; ಹರಣ: ಜೀವ, ಪ್ರಾಣ, ಅಪಹರಿಸು; ವಾಣಿ: ಮಾತು; ಕೇಣಿ: ಗುತ್ತಿಗೆ, ಗೇಣಿ; ಕುಹಕ: ಮೋಸ, ವಂಚನೆ; ಗೋಣು: ಕಂಠ, ಕುತ್ತಿಗೆ; ಮಾರಿ:ಅಳಿವು, ನಾಶ, ಮೃತ್ಯು; ಓಲಗ: ಅಗ್ರಪೂಜೆಗಾಗಿ ಕೂಡಿದ, ಸೇವೆ; ಉಣು: ತಿನ್ನು; ನೀಗು:ನಿವಾರಿಸಿಕೊಳ್ಳು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಹುರಿ: ಕಾಯಿಸು, ತಪ್ತಗೊಳಿಸು; ಬಲಿ: ಗಟ್ಟಿ, ದೃಢ; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಘನ:ಶ್ರೇಷ್ಠ; ಶೋಣ:ಕೆಂಪು ಬಣ್ಣ; ಸಲಿಲ: ನೀರು; ಶೋಣ ಸಲಿಲ: ರಕ್ತ; ಹೊನಲು: ತೊರೆ, ಹೊಳೆ; ಹೊಯ್ದು: ಹೊಡೆದು; ಹೊಗು: ಪ್ರವೇಶಿಸು; ಬವರಿ: ತಿರುಗುವುದು;

ಪದವಿಂಗಡಣೆ:
ಚೂಣಿ +ತಲೆ+ಒತ್ತಿದುದು +ಹರಣದ
ವಾಣಿ +ಕೇಣಿಯ +ಕುಹಕವಿಲ್ಲದೆ
ಗೋಣು+ಮಾರಿಗಳ್+ಓಲಗದ +ಹಣರ್+ಉಣವ +ನೀಗಿದರು
ಹೂಣಿಗರು+ ಹುರಿಬಲಿದು +ಹಾಣಾ
ಹಾಣಿಯಲಿ +ಹೊಯ್ಯಾಡಿದರು +ಘನ
ಶೋಣ +ಸಲಿಲದ +ಹೊನಲು +ಹೊಯ್ದುದು +ಹೊಗುವ +ಬವರಿಗರ

ಅಚ್ಚರಿ:
(೧) ಯುದ್ಧದ ಘೋರತೆಯ ದೃಶ್ಯ, ರಕ್ತವು ನದಿಯಾಗಿ ಹರಿಯಿತು ಎಂದ್ ಹೇಳುವ ಪರಿ – ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ
(೨) ಹ ಕಾರದ ಸಾಲು ಪದಗಳು – ಹೂಣಿಗರು ಹುರಿಬಲಿದು ಹಾಣಾಹಾಣಿಯಲಿ ಹೊಯ್ಯಾಡಿದರು; ಹೊನಲು ಹೊಯ್ದುದು ಹೊಗುವ ಬವರಿಗರ

ನಿಮ್ಮ ಟಿಪ್ಪಣಿ ಬರೆಯಿರಿ