ಪದ್ಯ ೧೩: ಕೃಷ್ಣನು ಯಾವ ಮಾರ್ಗವನ್ನು ಸೂಚಿಸಿದನು?

ದಂಡನಯ ತರುಬಿದರೆ ಗುಣದಲಿ
ಖಂಡಿಸುವುದಿದಿರಾದ ತರುಗಳು
ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು
ಚಂಡಬಲನೀ ಭೀಷ್ಮ ಮುಳಿದರೆ
ಖಂಡಪರಶುವ ಗಣಿಸನೆನೆ ಖರ
ದಂಡನಾಭನ ಮತಕೆ ನೃಪತಿ ಹಸಾದವೆನುತಿರ್ದ (ಭೀಷ್ಮ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಅಸಾಧ್ಯವಾದರೆ ಸಾಮದಿಂದ ಗೆಲ್ಲಬೇಕು, ಪ್ರವಾಹ ಬಂದಾಗ ಅದರ ಭರಕ್ಕೆ ಮರಗಳೂ ಮುರಿದು ಬೀಳುತ್ತವೆ, ಆದರೆ ಗೇಕು ಎಂಬ ಹುಲ್ಲು ಪಕ್ಕಕ್ಕೆ ಬಾಗಿ ಉಳಿದುಕೊಳ್ಳುತ್ತದೆ, ಭೀಷ್ಮನು ಶಿವನನ್ನೂ ಲೆಕ್ಕಕ್ಕಿಟ್ಟಿಲ್ಲ ಎಂದು ಕೃಷ್ಣನು ಹೇಳಲು ಧರ್ಮಜನು ಮಹಾಪ್ರಸಾದ ಎಂದು ಅವನ ಮಾತಿಗೆ ಒಪ್ಪಿದನು.

ಅರ್ಥ:
ದಂಡ: ಶಿಕ್ಷೆ, ದಂಡನೆ, ಸಾಮ, ದಾನ, ಭೇದ ಮತ್ತು ದಂಡಗಳೆಂಬ ರಾಜನೀತಿಯ ನಾಲ್ಕು ಉಪಾಯ ಗಳಲ್ಲೊಂದು; ನಯ: ಶಾಸ್ತ್ರ ರಾಜನೀತಿ, ನುಣುಪು; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಗುಣ: ನಡತೆ; ಖಂಡಿಸು: ಸೀಳು; ಇದಿರು: ಎದುರು; ತರು: ಮರ; ದಿಂಡು: ಕಾಂಡ, ಬೊಡ್ಡೆ; ಕೆಡೆ: ಬಾಗು, ಬೀಳು; ತೊರೆ: ನದಿ, ಹೊಳೆ; ಮಣಿ: ಬಾಗು; ಗೇಕು: ಒಂದು ಬಗೆಯ ಹುಲ್ಲು; ಬದುಕು: ಜೀವಿಸು; ಚಂಡಬಲ: ಪರಾಕ್ರಮಿ; ಮುಳಿ: ಕೋಪ; ಖಂಡಪರಶು: ಶಿವ; ಗಣಿಸು: ಲೆಕ್ಕಿಸು; ಖರ: ವಿಶೇಷವಾಗಿ; ಖರದಂಡನಾಭ: ಹೊಕ್ಕಳಲ್ಲಿ ಕಮಲವನ್ನುಳ್ಳವನು, ಕೃಷ್ಣ; ಮತ: ವಿಚಾರ; ನೃಪ: ರಾಜ; ಹಸಾದ: ಅನುಗ್ರಹ, ದಯೆ;

ಪದವಿಂಗಡಣೆ:
ದಂಡನಯ +ತರುಬಿದರೆ +ಗುಣದಲಿ
ಖಂಡಿಸುವುದ್+ಇದಿರಾದ +ತರುಗಳು
ದಿಂಡುಗೆಡೆವವು+ ತೊರೆಗೆ+ ಮಣಿದರೆ+ ಗೇಕು +ಬದುಕುವುದು
ಚಂಡಬಲನೀ +ಭೀಷ್ಮ +ಮುಳಿದರೆ
ಖಂಡಪರಶುವ +ಗಣಿಸನ್+ಎನೆ +ಖರ
ದಂಡನಾಭನ+ ಮತಕೆ+ ನೃಪತಿ +ಹಸಾದ+ವೆನುತಿರ್ದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತರುಗಳು ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು

ನಿಮ್ಮ ಟಿಪ್ಪಣಿ ಬರೆಯಿರಿ