ಪದ್ಯ ೨೪: ಭೀಷ್ಮನು ಯಾರ ಹಣೆಗೆ ಬಾಣವನ್ನು ಬಿಟ್ಟನು?

ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ (ಭೀಷ್ಮ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ರಥವನ್ನು ನಡೆಸಿ ಭೀಷ್ಮನ ಎದುರಿನಲ್ಲೇ ಮುಖಾಮುಖಿ ತಂದು ನಿಲ್ಲಿಸಲು, ಪಿತಾಮಹನು ಅರ್ಜುನನಿಗೆ ಸೆರೆ ಸಿಕ್ಕನೆಂದು ಕೌರವ ಸೈನ್ಯವು ಬೆದರಿ ಉದ್ಗರಿಸಿತು. ಆಗ ಭೀಷ್ಮನು ಹತ್ತು ಬಾಣಗಳಿಂದ ಶ್ರೀಕೃಷ್ಣನನ್ನು ಹೊಡೆದು ಪರಶುರಾಮರು ಕೊಟ್ಟಿದ್ದ ಬಾಣವನ್ನು ಶ್ರೀಕೃಷ್ಣನ ಹಣೆಗೆ ಗುರಿಯಿಟ್ಟು ಬಿಟ್ಟನು.

ಅರ್ಥ:
ರಥ: ಬಂಡಿ; ಹರಿಸು: ಓಡಾಡು; ಹತ್ತೆ: ಹತ್ತಿರ, ಸಮೀಪ; ಬರೆ: ಆಗಮಿಸು; ಅಳವಿ: ಶಕ್ತಿ, ಯುದ್ಧ; ಮುತ್ತಯ: ಮುತ್ತಾತ; ಸಿಲುಕು: ಬಂಧನಕ್ಕೊಳಗಾಗು; ಬಲ: ಶಕ್ತಿ; ಬೆದರು: ಹೆದರು; ಶರ: ಬಾಣ; ಮುಸುಕು: ಹೊದಿಕೆ; ಭಾರ್ಗವ: ಪರಶುರಾಮ; ತೊಡಚು: ಕಟ್ಟು, ಬಂಧಿಸು; ನೊಸಲು: ಹಣೆ; ಕೀಲಿಸು: ಜೋಡಿಸು, ನಾಟು; ದತ್ತ: ನೀಡಿದ;

ಪದವಿಂಗಡಣೆ:
ಮತ್ತೆ +ರಥವನು +ಹರಿಸಿ +ಭೀಷ್ಮನ
ಹತ್ತೆ +ಬರೆ +ಕಟ್ಟಳವಿಯಲಿ +ಹಾ
ಮುತ್ತಯನು +ಸಿಲುಕಿದನು+ ಶಿವಶಿವಯೆನುತ+ ಬಲ+ ಬೆದರೆ
ಹತ್ತು +ಶರದಲಿ +ಕೃಷ್ಣರಾಯನ
ಮತ್ತೆ +ಮುಸುಕಿದ+ ಬಹಳ +ಭಾರ್ಗವ
ದತ್ತ +ಬಾಣವ +ತೊಡಚಿ +ದೇವನ+ ನೊಸಲ+ ಕೀಲಿಸಿದ

ಅಚ್ಚರಿ:
(೧) ಮತ್ತೆ, ಹತ್ತೆ; ಮುತ್ತ, ದತ್ತ – ಪ್ರಾಸ ಪದಗಳು
(೨) ಬ ಕಾರದ ತ್ರಿವಳಿ ಪದ – ಬಹಳ ಭಾರ್ಗವದತ್ತ ಬಾಣವ

ನಿಮ್ಮ ಟಿಪ್ಪಣಿ ಬರೆಯಿರಿ