ಪದ್ಯ ೨೧: ಅರ್ಜುನ ಭೀಷ್ಮರ ಯುದ್ಧವು ಹೇಗೆ ನಡೆಯಿತು?

ನೊಂದು ಸೈರಿಸಿ ಮತ್ತೆ ಸರಳಿನ
ಸಂದಣಿಯ ಸೈಗರೆದನರ್ಜುನ
ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು
ಮುಂದೆ ನಿಲಲರಿಯದೆ ವಿತಾಳಿಸಿ
ಮಂದಗತಿಯೊಳು ಕೆಲಸಿಡಿದು ಹರಿ
ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ (ಭೀಷ್ಮ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮನ ಹೊಡೆತಗಳಿಂದ ನೊಂದ ಅರ್ಜುನನು ಸೈರಿಸಿಕೊಂಡು ಶಿವನೇ ಭಲೇ ಎನ್ನುತ್ತಿರಲು ಭೀಷ್ಮನ ಮೇಲೆ ಬಾಣಪ್ರಯೋಗ ಮಾಡಿದನು. ಅರ್ಜುನನೆದುರು ನಿಲ್ಲಲಾರದೆ ಭೀಷ್ಮನು ಮೆಲ್ಲನೆ ಸುಧಾರಿಸಿಕೊಡು ಪಕ್ಕಕ್ಕೆ ಸರಿದು, ಸಿಟ್ಟಿನಿಂದ ಮತ್ತೆ ಮತ್ತೆ ಅರ್ಜುನನನ್ನು ಘಾತಿಸಲಾರಂಭಿಸಿದನು.

ಅರ್ಥ:
ನೊಂದು: ನೋವುಂಡು; ಸೈರಿಸು: ತಾಳು, ಸಹಿಸು; ಸರಳು: ಬಾಣ; ಸಂದಣಿ: ಗುಂಪು; ಸೈ:ಸರಿಯಾದುದು, ತಕ್ಕದ್ದು; ಕರೆದು: ಬರೆಮಾಡು; ಇಂದುಧರ: ಈಶ್ವರ; ಮಝ: ಭಲೇ; ಭಾಪು: ಭೇಷ್; ಪಸರಿಸು: ಹರಡು; ಅಂಬು: ಬಾಣ; ಮುಂದೆ: ಎದುರು; ನಿಲಲು: ನಿಲ್ಲಲು; ವಿತಾಳಿಸು: ಹೆಚ್ಚಾಗು, ಅಧಿಕವಾಗು; ಮಂದಗತಿ: ನಿಧಾನ; ಕೆಲಸಿಡಿ: ಪಕ್ಕಕ್ಕೆ ಹಾರು; ಹರಿ: ಇಂದ್ರ; ನಂದನ: ಮಗ; ಬಿಡು: ತೊರೆ; ಎಸು: ಬಾಣ ಪ್ರಯೋಗ ಮಾಡು; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ನೊಂದು +ಸೈರಿಸಿ+ ಮತ್ತೆ +ಸರಳಿನ
ಸಂದಣಿಯ +ಸೈಗರೆದನ್+ಅರ್ಜುನನ್
ಇಂದುಧರ +ಮಝ +ಭಾಪುರೆನೆ +ಪಸರಿಸಿದವ್+ಅಂಬುಗಳು
ಮುಂದೆ +ನಿಲಲ್+ಅರಿಯದೆ+ ವಿತಾಳಿಸಿ
ಮಂದಗತಿಯೊಳು +ಕೆಲಸಿಡಿದು+ ಹರಿ
ನಂದನನ+ ಬಿಡದ್+ಎಸುತ +ಬಂದನು +ಭೀಷ್ಮ +ಮುಳಿಸಿನಲಿ

ಅಚ್ಚರಿ:
(೧) ಭೀಷ್ಮನನ್ನು ಹೊಗಳಿದ ಪರಿ – ಸರಳಿನ ಸಂದಣಿಯ ಸೈಗರೆದನರ್ಜುನನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು

ನಿಮ್ಮ ಟಿಪ್ಪಣಿ ಬರೆಯಿರಿ