ಪದ್ಯ ೮: ಭೀಮನ ಜೊತೆ ಯಾರು ಯುದ್ಧಕ್ಕೆ ಹೊರಟರು?

ನಡೆದರಾಹವಕನಿಲ ನಂದನ
ನೊಡನೆ ಸಾತ್ಯಕಿ ನಕುಲ ದ್ರುಪದರು
ತುಡುಕಿದರು ಬಿಲುಗೋಲನೈದಿತು ಪವನಜನ ಚೂಣಿ
ಗಡಣಿಸುವ ಮುಂಮೊಗದ ಕೌರವ
ಪಡೆಯ ಹೇರಡವಿಯನು ಸವರಲು
ಕಡಿತಕಾರರು ಮುಂದೆ ಹೊಕ್ಕುದು ನಕುಲ ಪಾರ್ಥಜರು (ಭೀಷ್ಮ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನೊಡನೆ ಸಾತ್ಯಕಿ, ನಕುಲ, ದ್ರುಪದರು ಬಿಲ್ಲು ಬಾಣಗಳನ್ನು ಹಿಡಿದು ಹೊರಟರು. ಮುಂದೆನಿಂತು ಕೌರವ ಸೈನ್ಯದ ಮಹಾರಣ್ಯವನ್ನು ನಾಶ ಮಾಡಲು ಅಭಿಮನ್ಯು ನಕುಲರು ಮುಂದೆ ಬಂದರು.

ಅರ್ಥ:
ನಡೆ: ಚಲಿಸು; ಆಹವ: ಯುದ್ಧ; ಅನಿಲನಂದನ: ವಾಯುಪುತ್ರ (ಭೀಮ); ತುಡುಕು: ಹೋರಾಡು, ಸೆಣಸು; ಬಿಲು: ಬಿಲ್ಲು, ಚಾಪ; ಕೋಲು: ಬಾಣ; ಐದು: ಬಂದು ಸೇರು; ಪವನಜ: ವಾಯುಪುತ್ರ (ಭೀಮ); ಚೂಣಿ: ಮುಂದಿನ ಸಾಲು; ಗಡಣ: ಸಮೂಹ; ಮೊಗ: ಮುಖ; ಪಡೆ: ಗುಂಪು; ಹೇರಡವಿ: ದಟ್ಟವಾದ ಕಾಡು; ಸವರು: ನಾಶಗೊಳಿಸು; ಕಡಿತ: ಕತ್ತರಿಸುವಿಕೆ; ಹೊಕ್ಕು: ಸೇರು;

ಪದವಿಂಗಡಣೆ:
ನಡೆದರ್+ಆಹವಕ್+ಅನಿಲ+ ನಂದನ
ನೊಡನೆ +ಸಾತ್ಯಕಿ +ನಕುಲ +ದ್ರುಪದರು
ತುಡುಕಿದರು +ಬಿಲುಗೋಲನ್+ಐದಿತು +ಪವನಜನ +ಚೂಣಿ
ಗಡಣಿಸುವ +ಮುಂಮೊಗದ +ಕೌರವ
ಪಡೆಯ +ಹೇರಡವಿಯನು +ಸವರಲು
ಕಡಿತಕಾರರು+ ಮುಂದೆ +ಹೊಕ್ಕುದು +ನಕುಲ +ಪಾರ್ಥಜರು

ಅಚ್ಚರಿ:
(೧) ಕೌರವ ಸೈನ್ಯವನ್ನು ಮಹಾಟವಿಗೆ ಹೋಲಿಸುವ ಪರಿ – ಕೌರವಪಡೆಯ ಹೇರಡವಿಯನು ಸವರಲು
ಕಡಿತಕಾರರು ಮುಂದೆ ಹೊಕ್ಕುದು
(೨) ಅನಿಲನಂದನ, ಪವನಜ – ಭೀಮನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ