ಪದ್ಯ ೬: ಭೀಮನು ಏಕೆ ಬೇಸತ್ತನು?

ಕಲಹದೊಳು ಕರಿಘಟೆಯ ಹೊಯ್ ಹೊ
ಯ್ದಲಸಿ ಕೌರವನನುಜನನು ಮುಂ
ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ
ನೆಲನ ಲೋಭಿಯ ಬುದ್ಧಿ ಮರಣಕೆ
ಫಲಿಸಬೇಹುದು ಕರೆ ಸುಯೋಧನ
ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ (ಭೀಷ್ಮ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ಭೀಮನು ಯುದ್ಧದಲ್ಲಿ ಆನೆಗಳನ್ನು ಕೊಂದು ಕೊಂದು ಬೇಸತ್ತನು. ದುಶ್ಯಾಸನನು ಎದುರಿಸಿದರೂ ಲೆಕ್ಕಿಸದೆ ಬೇಸತ್ತು ಕೋಪಗೊಂಡು, ರಾಜ್ಯ ಲೋಭದ ಬುದ್ಧಿಯು ಮರಣದಿಂದಲೇ ಫಲಿಸಬೇಕು, ದುರ್ಯೋಧನನು ಯುದ್ಧಕ್ಕೆ ಬರಲಿ ಕರೆಯಿರಿ ಎಂದು ಗದೆಯನ್ನು ತೂಗಿ ಗರ್ಜಿಸಿದನು.

ಅರ್ಥ:
ಕಲಹ: ಯುದ್ಧ; ಕರಿಘಟೆ: ಆನೆಗಳ ಗುಂಪು; ಹೊಯ್ದು: ಹೊಡೆದು; ಅಲಸು: ಬಳಲಿಕೆ; ಅನುಜ: ತಮ್ಮ; ಮುಂಕೊಳಿಸು: ಎದುರಿಸು; ಕಳುಹು: ತೆರಳು; ಬೇಸರ: ಬೇಜಾರು; ಅನಿಲಸುತ: ವಾಯುಪುತ್ರ; ಮಸಗು:ಹರಡು, ತಿಕ್ಕು; ನೆಲ: ಭೂಮಿ; ಲೋಭಿ: ಕೃಪಣ, ಜಿಪುಣ; ಬುದ್ಧಿ: ತಿಳಿವು, ಅರಿವು; ಮರಣ: ಸಾವು; ಫಲಿಸು: ಕೈಗೂಡು; ಬವರ: ಕಾಳಗ, ಯುದ್ಧ; ಗದೆ: ಒಂದು ಬಗೆಯ ಆಯುಧ, ಮುದ್ಗರ; ತೂಗು:ತೂಗಾಡಿಸು;

ಪದವಿಂಗಡಣೆ:
ಕಲಹದೊಳು +ಕರಿಘಟೆಯ +ಹೊಯ್ +ಹೊ
ಯ್ದ್+ಅಲಸಿ +ಕೌರವನ್+ಅನುಜನನು +ಮುಂ
ಕೊಳಿಸಿ +ಕೊಳ್ಳದೆ +ಕಳುಹಿ +ಬೇಸರುತ್+ಅನಿಲಸುತ +ಮಸಗಿ
ನೆಲನ +ಲೋಭಿಯ +ಬುದ್ಧಿ +ಮರಣಕೆ
ಫಲಿಸಬೇಹುದು +ಕರೆ+ ಸುಯೋಧನ
ನಿಲಲಿ+ ಬವರಕ್ಕೆನುತ +ಗದೆಯನು +ತೂಗಿದನು +ಭೀಮ

ಅಚ್ಚರಿ:
(೧) ಭೀಮನ ಖಾರವಾದ ಮಾತು – ನೆಲನ ಲೋಭಿಯ ಬುದ್ಧಿ ಮರಣಕೆ ಫಲಿಸಬೇಹುದು ಕರೆ ಸುಯೋಧನ

ನಿಮ್ಮ ಟಿಪ್ಪಣಿ ಬರೆಯಿರಿ