ಪದ್ಯ ೮೮: ಸೂರ್ಯನೇಕೆ ಅಂಜಿದನು?

ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ (ಭೀಷ್ಮ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ವಿಂಧ್ಯಾಚಲದೊಡನೆ ಯುದ್ಧಮಾಡಲು ಬಾಣಗಳು ಹೊಕ್ಕಿವೆಯೋ ಏನೋ ಎಂದು ಸೂರ್ಯನು ಭಯಗೊಂಡನು. ಬಾಣಗಳೋ, ಮೇಘವೃಕ್ಷದ ತುದಿಕೊಂಬೆಗಳೋ, ನೆಲಕ್ಕುರುಳುವ ತಲೆಗಳೋ ಆ ಮರದ ಹಣ್ಣುಗಳೋ ಎಂಬಂತೆ ತೋರಿತು.

ಅರ್ಥ:
ಎಲೆಲೆ: ಆಶ್ಚರ್ಯ ಸೂಚಿಸುವ ಪದ; ಅಚಲ: ಬೆಟ್ಟ; ಹರಿಬ: ಕಾಳಗ, ಯುದ್ಧ, ಕಾರ್ಯ; ಕಳ: ರಣರಂಗ; ಹೊಕ್ಕು: ಸೇರು; ಕಣೆ: ಬಾಣ; ನಳಿನಸಖ: ಕಮಲನ ಮಿತ್ರ (ಸೂರ್ಯ); ಅಂಜು: ಹೆದರು; ಕೋಪಾಟೋಪ: ಉಗ್ರವಾದ ಕೋಪ; ಅಭ್ರ: ಆಗಸ; ಅಲಗು: ಕತ್ತಿ, ಖಡ್ಗ; ಕಣೆ: ಬಾಣ; ಮೇಘ: ಮೋಡ; ತರು: ವೃಕ್ಷ; ತಳಿತ: ಚಿಗುರಿದ; ತುದಿ: ಅಗ್ರಭಾಗ; ಕೊಂಬು: ಟೊಂಗೆ, ಕೊಂಬೆ; ಬೀಳು: ಕುಸಿ; ತಲೆ: ಶಿರ; ಫಲ: ಹಣ್ಣು; ಸಮೂಹ: ಗುಂಪು; ಚಿತ್ರ: ಬರೆದ ಆಕೃತಿ;

ಪದವಿಂಗಡಣೆ:
ಎಲೆಲೆ +ವಿಂಧ್ಯಾಚಲದ+ ಹರಿಬಕೆ
ಕಳನ +ಹೊಕ್ಕವೊ +ಕಣೆಗಳ್+ಎನುತಾ
ನಳಿನಸಖನ್+ಅಂಜಿದನು +ಕೋಪಾಟೋಪಕ್+ಅಭ್ರದಲಿ
ಅಲಗು+ಕಣೆಗಳೊ+ ಮೇಘ+ತರುವಿನ
ತಳಿತ+ ತುದಿ+ಕೊಂಬುಗಳೊ +ಬೀಳುವ
ತಲೆಗಳೋ +ತತ್ಫಲ+ಸಮೂಹವೊ +ಚಿತ್ರವಾಯ್ತೆಂದ

ಅಚ್ಚರಿ:
(೧) ರೂಪದಕ ಪ್ರಯೋಗ – ವಿಂಧ್ಯಾಚಲದ ಹರಿಬಕೆ ಕಳನ ಹೊಕ್ಕವೊ ಕಣೆಗಳೆನುತಾನಳಿನಸಖನಂಜಿದನು

ನಿಮ್ಮ ಟಿಪ್ಪಣಿ ಬರೆಯಿರಿ