ಪದ್ಯ ೬೩: ಗುಜ್ಜರ ದೇಶದ ರಾವುತರು ಹೇಗೆ ಹೋರಾಡಿದರು?

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ ತ
ತ್ತರಿದರಿದು ಹೊಯ್ದಾಡಿದರು ಗುಜ್ಜರದ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಗುಜ್ಜರ ದೇಶದ ರಾವುತರು ಎದುರಾಳಿಗಳನ್ನು ಜರೆದು ಹೊಡೆದ ಸದ್ದು ಸಿಡಿಲು ಬಡಿತದಂತೆ ಕೇಳಿತು. ದೂಹತ್ತಿಗಳ ಹೊಡೆತ ರಾವುತರ ತಲೆಗಳನ್ನು ಕಡಿದು ನೆಲಕ್ಕೆ ಅಪ್ಪಳಿಸಿತು. ಕುದುರೆಗಳನ್ನು ಅಟ್ಟಿದರೆ ಹೊಡೆತದಿಂದ ಕೂರ್ಮನು ಒರಲಿದನು. ಶತ್ರುಗಳನ್ನು ತರಿತರಿದು ಅವರು ಹೋರಾಡಿದರು.

ಅರ್ಥ:
ಜರೆ: ಬಯ್ಯುವುದು; ಸರಿಸ: ವೇಗ, ರಭಸ; ಏರು: ಮೇಲೇಳು; ಸಿಡಿಲು: ಅಶನಿ; ಉರುಬು: ಅತಿಶಯವಾದ ವೇಗ; ಘಾಯ: ಪೆಟ್ಟು; ಅರುಹು:ತಿಳಿಸು, ಹೇಳು; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಸ್ತಕ: ಶಿರ; ಇಳಿ: ಕೆಳಗೆ ಬಾಗು; ಕೊರೆ: ಕತ್ತರಿಸು; ಇಳೆ: ಭೂಮಿ; ಹಯ: ಕುದುರೆ; ನೂಕು: ತಳ್ಳು; ಒರಲು: ಅರಚು, ಕೂಗಿಕೊಳ್ಳು; ತಳ: ಸಮತಟ್ಟಾದ ಪ್ರದೇಶ; ಕಮಠ:ಕೂರ್ಮ; ತತ್ತರಿ: ಒಂದೇಸವನೆ ಹೊಡೆ; ಹೊಯ್ದಾಡು: ಹೋರಾಡು; ಗುಜ್ಜರ: ಒಂದು ಪ್ರಾಂತ್ಯದ ಹೆಸರು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಜರೆದು +ಸರಿಸದಲ್+ಏರಿದರೆ+ ಸಿಡಿಲ್
ಉರುಬಿದಂತಾಯಿತ್ತು +ಘಾಯವನ್
ಅರುಹಿದರೆ+ ದೂಹತ್ತಿ+ ರಾವ್ತರ+ ಮಸ್ತಕದೊಳ್+ಇಳಿದು
ಕೊರೆದುದ್+ಇಳೆಯನು +ಹಯವ +ನೂಕಿದಡ್
ಒರಲಿದನು +ತಳ+ ಕಮಠನ್+ಎನೆ +ತ
ತ್ತರಿದರಿದು +ಹೊಯ್ದಾಡಿದರು +ಗುಜ್ಜರದ+ ರಾವುತರು

ಅಚ್ಚರಿ:
(೧) ಕುದುರೆಗಳು ಓಡುವ ವೇಗವನ್ನು ಹೇಳುವ ಪರಿ – ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ

ನಿಮ್ಮ ಟಿಪ್ಪಣಿ ಬರೆಯಿರಿ