ಪದ್ಯ ೩೫: ಕರ್ಣನು ಭೀಷ್ಮರನ್ನು ಹೇಗೆ ವರ್ಣಿಸಿದನು?

ತೊಗಲು ಸಡಿಲಿದ ಗಲ್ಲ ಬತ್ತಿದ
ಹೆಗಲು ನರುಕಿದ ನರೆತ ಮೀಸೆಯ
ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವದ
ಅಗಿಯಲಲುಗುವ ತಲೆಯ ಮುಪ್ಪಿನ
ಮುಗುದನೀತನ ಕಾದ ಹೇಳಿದು
ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ (ಭೀಷ್ಮ ಪರ್ವ, ೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹಲ್ಲದ ಚರ್ಮ ಸಡಿಲಿದೆ, ಭುಜ ಬತ್ತಿ ಹೋಗಿದೆ, ಮೀಸೆ ಬೆಳ್ಳಗಾಗಿದೆ, ಹಲ್ಲುಗಳು ಉದುರಿ ಹೋಗಿವೆ, ಮೈಯಲ್ಲಿ ಮೂಳೆಗಳು ಸೋತಿವೆ, ದೇಹದ ಅಂಗಾಗಳು ಶಕ್ತಿಹೀನವಾಗಿವೆ, ಜಗಿದರೆ ತಲೆ ಅಲುಗಾಡುತ್ತದೆ, ಮುದುಕನಾದ ಈ ಮುಗ್ಧನು ಹೋರಾಟಮಾಡಲು ಅಶಕ್ತನು, ಇವನನ್ನು ಸೇನಾಧಿಪತಿಯಾಗಿ ಮಾಡಿ ಹೋರಾಡು ಎಂದು ಹೇಳಿದ್ದು ಹಾಸ್ಯಾಸ್ಪದವಲ್ಲವೇ ಎಂದು ಕರ್ಣನು ಹೇಳಿದನು.

ಅರ್ಥ:
ತೊಗಲು: ಚರ್ಮ; ಸಡಿಲ: ಬಿಗಿಯಿಲ್ಲದಿರುವುದು, ಶಿಥಿಲವಾದುದು; ಗಲ್ಲ: ಕದಪು, ಕೆನ್ನೆ; ಬತ್ತು: ಒಣಕಲು, ಒಣಗಿದುದು; ಹೆಗಲು: ಭುಜ; ನರುಕು: ತಗ್ಗಿಹೋಗು, ಜಜ್ಜಿಹೋಗು; ನರೆ: ಬೆಳ್ಳಗಾದ ಕೂದಲು; ಜಗುಳು: ಜಾರು, ಸಡಿಲವಾಗು; ಹಲು: ದಂತ; ಹಾಯಿ: ಚಾಚು; ಎಲುಬು: ಮೂಳೆ; ನೆಗ್ಗು: ಕುಗ್ಗು, ಕುಸಿ; ಅವಯವ: ಅಂಗ; ಅಗಿ: ಅಲುಗಾಡು, ಜಗಿ; ಅಲುಗು: ಅಲ್ಲಾಡು; ತಲೆ: ಶಿರ; ಹೇಳು: ತಿಳಿಸು; ಮುಗುದ: ಮುಗ್ಧ; ಕಾದು: ಹೋರಾಡು; ಮುಪ್ಪು: ಮುದುಕ; ನಗೆ: ಹಾಸ್ಯಾಸ್ಪದ; ಸುರಿ: ಚೆಲ್ಲು; ರಾಯ: ರಾಜ; ಕಟಕ: ಯುದ್ಧ;

ಪದವಿಂಗಡಣೆ:
ತೊಗಲು +ಸಡಿಲಿದ +ಗಲ್ಲ +ಬತ್ತಿದ
ಹೆಗಲು +ನರುಕಿದ+ ನರೆತ+ ಮೀಸೆಯ
ಜಗುಳ್ದ+ ಹಲುಗಳ +ಹಾಯಿದ್+ಎಲುಗಳ +ನೆಗ್ಗಿದ್+ಅವಯವದ
ಅಗಿಯಲ್+ಅಲುಗುವ +ತಲೆಯ +ಮುಪ್ಪಿನ
ಮುಗುದನ್+ಈತನ +ಕಾದ +ಹೇಳಿದು
ನಗೆಯ +ಸುರಿದೈ +ರಾಯ +ಕಟಕದೊಳ್+ಎಂದನಾ +ಕರ್ಣ

ಅಚ್ಚರಿ:
(೧) ಭೀಷ್ಮರನ್ನು ವರ್ಣಿಸುವ ಪರಿ – ಅಗಿಯಲಲುಗುವ ತಲೆಯ ಮುಪ್ಪಿನ ಮುಗುದನ್

ನಿಮ್ಮ ಟಿಪ್ಪಣಿ ಬರೆಯಿರಿ