ಪದ್ಯ ೨೩: ಭೀಷ್ಮರು ಯಾರು ದುರ್ಬಲರೆಂದು ಹೇಳಿದರು?

ದೈವ ಬಲವವರಲ್ಲಿ ನೀವೇ
ದೈವ ಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ (ಭೀಷ್ಮ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅವರಿಗೆ ದೈವಬಲವಿದೆ. ನೀವು ದೈವ ಹೀನರು. ಅವರೈವರೂ ಸತುಪುರುಷರ ಶೀಲವುಳ್ಳವರು. ಧರ್ಮಪರರು. ನೀವು ಅಧಾರ್ಮಿಕರು. ಲೋಕವು ಅವರಿಗೆ ಗೌರವವನ್ನು ಕೊಡುತ್ತದೆ. ಅವರ ಕೆಲಸದಲ್ಲಿ ಹೆಗಲು ಕೊಡುತ್ತದೆ. ಲೋಕವು ನಿಮ್ಮನ್ನು ಬೈಯ್ಯುತ್ತದೆ. ಅವರಿಗೆ ನಿಮಗಿಂತಲೂ ಐದು ಪಟ್ಟು ಹೆಚ್ಚಿನ ಸಾಹಸವಿದೆ, ನೀವು ದುರ್ಬಲರೆಂದು ಭೀಷ್ಮರು ನುಡಿದರು.

ಅರ್ಥ:
ದೈವ: ಭಗವಂತ; ಬಲ: ಶಕ್ತಿ; ಹೀನ: ಕೆಟ್ಟದು, ತ್ಯಜಿಸಿದ; ಧರ್ಮ: ಧಾರಣೆ ಮಾಡಿದುದು; ಸತ್ಪುರುಷ: ಒಳ್ಳೆಯ ಜನ; ಶೀಲ: ಗುಣ; ಅಧಾರ್ಮಿಕ: ಧರ್ಮದ ದಾರಿಯಲ್ಲಿ ನಡೆಯದವರು; ಮುಯ್ಯಿ: ಉಡುಗೊರೆ; ಭುವನ: ಭೂಮಿ; ಬೈವುದು: ಜರಿ; ಇನಿಬರ: ಇಷ್ಟು ಜನ; ಐವಡಿ: ಐದು ಪಟ್ಟು; ಸಹಸಿ: ಪರಾಕ್ರಮಿ; ದುರ್ಬಲ: ಶಕ್ತಿಹೀನ;

ಪದವಿಂಗಡಣೆ:
ದೈವ +ಬಲವ್+ಅವರಲ್ಲಿ +ನೀವೇ
ದೈವ +ಹೀನರು +ಧರ್ಮ+ಪರರ್+ಅವರ್
ಐವರೂ+ ಸತ್ಪುರುಷಶೀಲರು +ನೀವ್+ಅಧಾರ್ಮಿಕರು
ಮುಯ್ವನ್+ಆನುವುದ್+ಅವರ್ಗೆ +ಭುವನವು
ಬೈವುದೈ+ ನಿಮ್ಮಿನಿಬರನು+ ನಿಮಗ್
ಐವಡಿಯ +ಸಹಸಿಗಳ್+ಅವರು +ದುರ್ಬಲರು +ನೀವೆಂದ

ಅಚ್ಚರಿ:
(೧) ದೈವ ಪದದ ಬಳಕೆ – ದೈವ ಬಲವವರಲ್ಲಿ ನೀವೇದೈವ ಹೀನರು
(೨) ಧರ್ಮ ಪದದ ಬಳಕೆ – ಧರ್ಮಪರರವರೈವರೂ ಸತ್ಪುರುಷಶೀಲರು ನೀವಧಾರ್ಮಿಕರು

ನಿಮ್ಮ ಟಿಪ್ಪಣಿ ಬರೆಯಿರಿ