ಪದ್ಯ ೧: ಕೌರವನು ಯಾರನ್ನು ಪರಿಮಿತಕ್ಕೆ ಕರೆದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಲ್ಲಿಗೆ
ಕಾಳಗದ ಕಾತರಿಗರಿವರಟ್ಟಿದರು ಭಟ್ಟರನು
ಕೇಳಿದನು ಕುರುಭೂಮಿಯಲಿ ರಿಪು
ಜಾಲದುದಯವನಂದು ಕುರುಕುಲ
ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ (ಭೀಷ್ಮ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುದ್ಧದ ಕಾತರತೆಯಲ್ಲಿದ್ದ ಪಾಂಡವರು ಕೌರವನಲ್ಲಿ ದೂತರನ್ನು ಕಳಿಸಿದರು, ಯುದ್ಧರಂಗದಲ್ಲಿ ಶತ್ರುಗಳು ಸಿದ್ಧರಾಗಿರುವುದನ್ನು ಕೇಳಿದ ಕೌರವನು ಮಂತ್ರಾಲೋಚನೆಗಾಗಿ ಆಪ್ತರನ್ನೂ ಮಂತ್ರಿಗಳನ್ನೂ ಕರೆಸಿದನು.

ಅರ್ಥ:
ಧರಿತ್ರೀ: ಭೂಮಿ; ಪಾಲ: ಒಡೆಯ; ರಾಯ: ರಾಜ; ಕಾಳಗ: ಯುದ್ಧ; ಕಾತರ: ಕಳವಳ; ಅರಿ: ತಿಳಿ; ಅಟ್ಟು: ಕಳಿಸು; ಭಟ್ಟ: ದೂತ; ಕೇಳು: ಆಲಿಸು; ರಿಪು: ವೈರಿ; ಜಾಲ: ಗುಂಪು; ಉದಯ: ಹುಟ್ಟು; ಮೌಳಿ: ಶಿರ, ಕಿರೀಟ; ಕರೆಸು: ಬರೆಮಾಡು; ಆಪ್ತ: ಹತ್ತಿರದ; ಪರಿಮಿತ: ಸ್ವಲ್ಪ; ಮಂತ್ರಿ: ಸಚಿವ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೌರವರಾಯನಲ್ಲಿಗೆ
ಕಾಳಗದ+ ಕಾತರಿಗ್+ಅರಿವರ್+ಅಟ್ಟಿದರು +ಭಟ್ಟರನು
ಕೇಳಿದನು +ಕುರುಭೂಮಿಯಲಿ +ರಿಪು
ಜಾಲದ್+ಉದಯವನ್+ಅಂದು +ಕುರುಕುಲ
ಮೌಳಿ +ಕರೆಸಿದನ್+ಆಪ್ತರನು +ಪರಿಮಿತಕೆ +ಮಂತ್ರಿಗಳ

ಅಚ್ಚರಿ:
(೧) ಧರಿತ್ರೀಪಾಲ, ರಾಯ – ಸಮನಾರ್ಥಕ ಪದ
(೨) ಕೌರವರಾಯ, ಕುರುಕುಲಮೌಳಿ – ದುರ್ಯೋಧನನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ