ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣರಾಯನ
ಪಾದದರುಶನವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದ ಹದನನು ಕರುಣಿಸೆಂದನು ಭೂಪ ನರಯಣಗೆ (ವಿರಾಟ ಪರ್ವ, ೧೧ ಸಂಧಿ, ೮೫ ಪದ್ಯ)
ತಾತ್ಪರ್ಯ:
ಅಭಿಮನ್ಯುವಿನ ವಿವಾಹಾನಂತರ ಕೃಷ್ಣನಲ್ಲಿ ಧರ್ಮಜನು, ಅಭಿಮನ್ಯುವಿನ ವಿವಾಹವು ಸಾಂಗವಾಗಿ ನೆರವೇರಿತು, ಶ್ರೀಕೃಷ್ಣನ ದರ್ಶನಮಾತ್ರದಿಂದ ನಮ್ಮ ಏಳಿಗೆಯ ವೇಗವು ಇಮ್ಮಡಿಯಾಯಿತು, ಭೂಮಿಯನ್ನು ಕೌರವನಿಗೆ ಅಡವಿಟ್ಟಿದ್ದರೂ, ನಾವು ಸತ್ಯವನ್ನು ರಕ್ಷಣೆ ಮಾಡಿಕೊಂಡೆವು ಎಂದು ಆಲೋಚಿಸಿ, ಮುಂದಿನ ಕಾರ್ಯಭಾರವನ್ನು ಕರುಣೆಯಿಂದ ಅಪ್ಪಣೆ ಕೊಡಿಸು ಎಂದು ಬೇಡಿದನು.
ಅರ್ಥ:
ಮದುವೆ: ವಿವಾಹ; ಮಹಾ: ಶ್ರೇಷ್ಠ; ದಯಾಂಬುಧಿ: ಕರುಣಾಸಾಗರ; ಅಂಬುಧಿ: ಸಾಗರ; ರಾಯ: ರಾಜ; ಪಾದ: ಚರಣ; ದರುಶನ: ನೋಟ; ಇಮ್ಮಡಿ: ಎರಡುಪಟ್ಟು; ಉದಯ: ಏಳಿಗೆ; ಮೇದಿನಿ: ಭೂಮಿ; ಒತ್ತೆ:ಅಡವು; ಕಾದು: ಕಾಪಾಡು; ಸತ್ಯ: ದಿಟ; ಮೇಲಾದ: ಮೊದಲು ನಡೆದ; ಹದ: ಸ್ಥಿತಿ; ಕರುಣಿಸು: ದಯೆತೋರು; ಭೂಪ: ರಾಜ;
ಪದವಿಂಗಡಣೆ:
ಆದುದ್+ಅಭಿಮನ್ಯುವಿನ +ಮದುವೆ +ಮ
ಹಾ +ದಯಾಂಬುಧಿ +ಕೃಷ್ಣ+ರಾಯನ
ಪಾದ+ದರುಶನವಾಗಲ್+ಇಮ್ಮಡಿಸಿತ್ತು +ನಮ್ಮುದಯ
ಮೇದಿನಿಯ +ನಾವೊತ್ತೆಯಿಟ್ಟೆವು
ಕಾದುಕೊಂಡೆವು+ ಸತ್ಯವನು+ ಮೇ
ಲಾದ +ಹದನನು +ಕರುಣಿಸೆಂದನು +ಭೂಪ +ನರಯಣಗೆ
ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಪರಿ – ಮಹಾ ದಯಾಂಬುಧಿ ಕೃಷ್ಣರಾಯ