ಪದ್ಯ ೮೩: ಸುಗಂಧದ ಓಕುಳಿಯ ಪ್ರಭಾವ ಹೇಗಿತ್ತು?

ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನವ
ಪರಮಸೌರಭಕಲಸಿಕೊಂಡುದು ಸಕಲ ಸುರಕುಲವ (ವಿರಾಟ ಪರ್ವ, ೧೧ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಂಧ, ಕಸ್ತೂರಿ, ಪನ್ನೀರುಗಳ ಪ್ರವಾಹದಿಂದ ಭೂಮಿಯು ನೆನೆಯಿತು. ದಿಕ್ಕುಗಳು ಪರಿಮಳಭರಿತವಾದವು. ತುಂತುರಿನಿಂದ ಸಮುದ್ರವೂ ಕಂಪಾಯಿತು. ಸೂರ್ಯನೂ ಸುಗಂಧ ಭರಿತವಾದನೆಂದ ಮೇಲೆ ಗಾಳಿಯಲ್ಲಿ ಸುಗಂಧ ತುಂಬಿದುದು ಆಶ್ಚರ್ಯವೇನಲ್ಲ. ಓಕುಳಿಯ ಸುಗಂಧದಿಂದ ದೇವತೆಗಳೂ ತೃಪ್ತರಾದರು.

ಅರ್ಥ:
ಧರಣಿ: ಭೂಮಿ; ನೆನೆ: ಒದ್ದೆಯಾಗು; ಗಂಧ: ಚಂದನ; ರಸ: ಸಾರ; ಕತ್ತುರಿ: ಕಸ್ತೂರಿ; ಪನ್ನೀರು: ಸುಗಂಧಯುಕ್ತವಾದ ನೀರು; ಹೊನಲು: ಪ್ರವಾಹ; ಒಡೆ: ಸೀಳು, ಬಿರಿ; ಎರಚು: ಚಿಮುಕಿಸು, ಚೆಲ್ಲು; ದೆಸೆ: ದಿಕ್ಕು; ಕಂಪು: ಸುಗಂಧ; ಅಂಬುಧಿ: ಸಾಗರ; ನವ: ಹೊಸ; ತುಷಾರ: ಹಿಮ, ಮಂಜು; ತರಣಿ: ಸೂರ್ಯ, ನೇಸರು; ಪರಿಮಳ: ಸುಗಂಧ; ಪವನ: ವಾಯು; ಸುರಭಿ: ಸುಗಂಧ; ಅಚ್ಚರಿ: ಆಶ್ಚರ್ಯ; ಗಗನ: ಆಗಸ; ಪರಮ: ಶ್ರೇಷ್ಠ; ಸೌರಭ: ಸುವಾಸನೆ; ಕಲಸು: ಬೆರಸು; ಸಕಲ: ಎಲ್ಲಾ; ಸುರಕುಲ: ದೇವತೆಗಳ ವಂಶ;

ಪದವಿಂಗಡಣೆ:
ಧರಣಿ +ನೆನೆದುದು +ಗಂಧ+ರಸ+ ಕ
ತ್ತುರಿಯ +ಪನ್ನೀರುಗಳ +ಹೊನಲ್+ಒಡೆವ್
ಎರಸಿ+ ದೆಸೆ +ಕಂಪಿಟ್ಟುದ್+ಅಂಬುಧಿ +ನವ +ತುಷಾರದಲಿ
ತರಣಿ +ಪರಿಮಳಿಸಿದನು +ಪವನನ
ಸುರಭಿತನವ್+ಅಚ್ಚರಿಯೆ +ಗಗನವ
ಪರಮ+ಸೌರಭ+ಕಲಸಿಕೊಂಡುದು +ಸಕಲ+ ಸುರಕುಲವ

ಅಚ್ಚರಿ:
(೧) ಉತ್ಪ್ರೇಕ್ಷೆ – ಪರಿಮಳದಿಂದ ಸೂರ್ಯನು ಕಂಪಿಸಿದನು – ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ
(೨) ಸಾಗರವೂ ಸುಗಂಧಮಯವಾಯಿತು ಎಂದು ಹೇಳುವ ಪರಿ – ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ

ನಿಮ್ಮ ಟಿಪ್ಪಣಿ ಬರೆಯಿರಿ