ಅರಸಿಯೈದೆತನಕ್ಕೆಯೆಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆಯೆಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯರೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯೊಳು ಮನ್ನಿಸಿದ (ವಿರಾಟ ಪರ್ವ, ೧೧ ಸಂಧಿ, ೬೧ ಪದ್ಯ)
ತಾತ್ಪರ್ಯ:
ಯುಧಿಷ್ಠಿರನು, ಮಾವ, ದ್ರೌಪದಿಯ ಮುತ್ತೈದೆ ಭಾಗ್ಯಕ್ಕೆ ನಮ್ಮ ಆಯುಷ್ಯಕ್ಕೆ, ರಾಜ್ಯದ ಸೊಗಸಿಗೆ ನಿಮ್ಮ ಮಗನಾದ ಈ ಕೃಷ್ಣನ ಕರುಣೆಯೇ ಕಾರಣ, ನಮಗೆ ದೇವತೆಗಳೂ ಸರಿಯಿಲ್ಲವೆಂದ ಮೇಲೆ, ಮನುಷ್ಯರು ಯಾವ ಲೆಕ್ಕ, ಎಂದು ವಸುದೇವನಿಗೆ ಹೇಳಿದನು.
ಅರ್ಥ:
ಅರಸಿ: ರಾಣಿ; ಐದು: ಬಂದು ಸೇರು; ಐದೆತನ: ಮುತ್ತೈದೆತನ; ಆಯುಷ್ಯ: ಜೀವಿತದ ಅವಧಿ; ರಾಜ್ಯ: ರಾಷ್ಟ್ರ; ಸಿರಿ: ಐಶ್ವರ್ಯ; ಸೊಂಪು: ಸೊಗಸು; ಮಗ: ಪುತ್ರ; ಹೊಣೆ: ಜವಾಬ್ದಾರಿ; ಸುರ: ದೈವ; ಮಿಕ್ಕ: ಉಳಿದ; ನರ: ಮನುಷ್ಯ; ಗಣ್ಯ: ಮಾನ್ಯ, ಪ್ರಮುಖ; ಅರಸ: ರಾಜ; ಮಧುರ: ಸಿಹಿ; ಉಕ್ತಿ: ಮಾತು; ಮನ್ನಿಸು: ಗೌರವಿಸು;
ಪದವಿಂಗಡಣೆ:
ಅರಸಿ+ಐದೆತನಕ್ಕೆ+ಎಮ್ಮ್
ಐವರ +ನಿಜಾಯುಷ್ಯಕ್ಕೆ+ರಾಜ್ಯದ
ಸಿರಿಯ +ಸೊಂಪಿಗೆ +ನಿಮ್ಮ +ಮಗನ್+ಈ+ ಕೃಷ್ಣ+ ಹೊಣೆ+ಎಮಗೆ
ಸುರರು +ಸರಿಯಿಲ್ಲೆಮಗೆ +ಮಿಕ್ಕಿನ
ನರರು +ಗಣ್ಯರೆ+ ಮಾವ +ಕೇಳೆಂದ್
ಅರಸ +ವಸುದೇವನನು+ ಮಧುರೋಕ್ತಿಯೊಳು +ಮನ್ನಿಸಿದ
ಅಚ್ಚರಿ:
(೧) ಸುರರು, ನರರು – ಪ್ರಾಸ ಪದ
(೨) ಅರಸ, ಅರಸಿ – ಜೋಡಿ ಪದಗಳು, ೧ -೬ ಸಾಲಿನ ಮೊದಲ ಪದ