ಪದ್ಯ ೬೧: ಧರ್ಮಜನು ವಸುದೇವನಿಗೇನು ಹೇಳಿದ?

ಅರಸಿಯೈದೆತನಕ್ಕೆಯೆಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆಯೆಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯರೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯೊಳು ಮನ್ನಿಸಿದ (ವಿರಾಟ ಪರ್ವ, ೧೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು, ಮಾವ, ದ್ರೌಪದಿಯ ಮುತ್ತೈದೆ ಭಾಗ್ಯಕ್ಕೆ ನಮ್ಮ ಆಯುಷ್ಯಕ್ಕೆ, ರಾಜ್ಯದ ಸೊಗಸಿಗೆ ನಿಮ್ಮ ಮಗನಾದ ಈ ಕೃಷ್ಣನ ಕರುಣೆಯೇ ಕಾರಣ, ನಮಗೆ ದೇವತೆಗಳೂ ಸರಿಯಿಲ್ಲವೆಂದ ಮೇಲೆ, ಮನುಷ್ಯರು ಯಾವ ಲೆಕ್ಕ, ಎಂದು ವಸುದೇವನಿಗೆ ಹೇಳಿದನು.

ಅರ್ಥ:
ಅರಸಿ: ರಾಣಿ; ಐದು: ಬಂದು ಸೇರು; ಐದೆತನ: ಮುತ್ತೈದೆತನ; ಆಯುಷ್ಯ: ಜೀವಿತದ ಅವಧಿ; ರಾಜ್ಯ: ರಾಷ್ಟ್ರ; ಸಿರಿ: ಐಶ್ವರ್ಯ; ಸೊಂಪು: ಸೊಗಸು; ಮಗ: ಪುತ್ರ; ಹೊಣೆ: ಜವಾಬ್ದಾರಿ; ಸುರ: ದೈವ; ಮಿಕ್ಕ: ಉಳಿದ; ನರ: ಮನುಷ್ಯ; ಗಣ್ಯ: ಮಾನ್ಯ, ಪ್ರಮುಖ; ಅರಸ: ರಾಜ; ಮಧುರ: ಸಿಹಿ; ಉಕ್ತಿ: ಮಾತು; ಮನ್ನಿಸು: ಗೌರವಿಸು;

ಪದವಿಂಗಡಣೆ:
ಅರಸಿ+ಐದೆತನಕ್ಕೆ+ಎಮ್ಮ್
ಐವರ +ನಿಜಾಯುಷ್ಯಕ್ಕೆ+ರಾಜ್ಯದ
ಸಿರಿಯ +ಸೊಂಪಿಗೆ +ನಿಮ್ಮ +ಮಗನ್+ಈ+ ಕೃಷ್ಣ+ ಹೊಣೆ+ಎಮಗೆ
ಸುರರು +ಸರಿಯಿಲ್ಲೆಮಗೆ +ಮಿಕ್ಕಿನ
ನರರು +ಗಣ್ಯರೆ+ ಮಾವ +ಕೇಳೆಂದ್
ಅರಸ +ವಸುದೇವನನು+ ಮಧುರೋಕ್ತಿಯೊಳು +ಮನ್ನಿಸಿದ

ಅಚ್ಚರಿ:
(೧) ಸುರರು, ನರರು – ಪ್ರಾಸ ಪದ
(೨) ಅರಸ, ಅರಸಿ – ಜೋಡಿ ಪದಗಳು, ೧ -೬ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ