ಪದ್ಯ ೩೨: ಉಡುಗೊರೆಗಳನ್ನು ಯಾರಿಗೆ ಕಳಿಸಿದ್ದರು?

ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬಕುಮಾರ ಕಂದರ್ಪಾನಿರುದ್ಧರಿಗೆ (ವಿರಾಟ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರು ಉಡುಗೊರೆಗಳನ್ನು ಕೃಷ್ಣನ ಎಲ್ಲಾ ಪರಿಜನರಿಗೆ ಕಳಿಸಿದ್ದರು. ಒಡೆಯಾ ಪಾಂಡವರು ನಿಮ್ಮ ಪಾದಗಳಿಗೆ, ರಾಣೀವಾಸದವರಿಗೆ, ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಕುಲಗುರುಗಳಾದ ಅಕ್ರೂರ ಉದ್ಧವರಿಗೆ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧರಿಗೆ ಈ ಉಡುಗೊರೆಗಳನ್ನು ಕಳಿಸಿದ್ದಾರೆ ಎಂದು ದೂತರು ಹೇಳಿದರು.

ಅರ್ಥ:
ಕಳುಹು: ಕೊಡು; ಉಡುಗೊರೆ: ಕಾಣಿಕೆ, ಬಳುವಳಿ; ಜೀಯ: ಒಡೆಯ; ನಿಮ್ಮಡಿ: ನಿಮ್ಮ ಪಾದ; ರಾಣಿ: ಅರಸಿ; ವರ್ಗ: ಗುಂಪು; ಬಲ: ಬಲರಾಮ; ಕುಲ: ವಂಶ; ಗುರು: ಆಚಾರ್ಯ; ಬಲುಭುಜ: ಮಹಾಪರಾಕ್ರಮ; ಲಲಿತ: ಸುಂದರವಾದ; ಕುಮಾರ: ಮಗ; ಕಂದರ್ಪ: ಮನ್ಮಥ, ಕಾಮ;

ಪದವಿಂಗಡಣೆ:
ಕಳುಹಿದ್+ಉಡುಗೊರೆ +ಜೀಯ +ನಿಮ್ಮಡಿ
ಗಳಿಗೆ+ ರಾಣೀವಾಸ +ವರ್ಗಕೆ
ಬಲಗೆ +ವಸುದೇವರಿಗೆ+ ದೇವಕಿ+ಉಗ್ರಸೇನರಿಗೆ
ಕುಲಗುರುಗಳ್+ಅಕ್ರೂರನುದ್ಧವ
ಬಲುಭುಜನು +ಕೃತವರ್ಮ +ಸಾತ್ಯಕಿ
ಲಲಿತ +ಸಾಂಬ+ಕುಮಾರ+ ಕಂದರ್ಪ+ಅನಿರುದ್ಧರಿಗೆ

ಅಚ್ಚರಿ:
(೧) ಕೃಷ್ಣನ ಪರಿವಾರದ ಪರಿಚಯ – ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಅಕ್ರೂರ ಉದ್ಧವ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧ

ನಿಮ್ಮ ಟಿಪ್ಪಣಿ ಬರೆಯಿರಿ