ಪದ್ಯ ೩೪: ಅರ್ಜುನನು ಏನನ್ನು ಗಮನಿಸಿ ಪ್ರಶ್ನಿಸಿದನು?

ಉಳಿದ ಮೂವರು ಕಲಿತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲಕೆ ಭಂಗವ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ (ವಿರಾಟ ಪರ್ವ, ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭೀಮ ನಕುಲ ಸಹದೇವರು ತ್ರಿಗರ್ತರನ್ನು ಗೆದ್ದ ರೀತಿಯನ್ನೂ, ಕೌರವ ಸೈನ್ಯದ ಪರಾಜಯವನ್ನು ಅರ್ಜುನನು ಹೇಳುತಿರಲು, ಧರ್ಮಜನ ಹಣೆಯ ಗಾಯವನು ನೋಡಿದನು. ಇದೇನು ಅಣ್ಣನ ಹಣೆಯಿಂದ ಚಿಕ್ಕ ರಕ್ತ ಬಿಂದುಗಳು ಒಸರುತ್ತಿವೆ ಎಂದು ಅರ್ಜುನನು ಕೇಳಿದನು.

ಅರ್ಥ:
ಉಳಿದ: ಮಿಕ್ಕ; ಕಲಿ: ಶೂರ; ತ್ರಿಗರ್ತ: ಒಂದು ದೇಶ; ಗೆಲಿದು: ಜಯಿಸು; ಪರಿ: ರೀತಿ; ಬಲ: ಸೈನ್ಯ; ಭಂಗ: ತುಂಡು, ಚೂರು; ನಿಲುಕಿ: ಮುಟ್ಟು, ತಾಗು; ರಾಯ: ರಾಜ; ಹಣೆ: ಲಲಾಟ; ಗಾಯ: ಪೆಟ್ಟು; ಬಳಿಕ: ನಂತರ; ಕಂಡು: ನೋಡು; ನೊಸಲು: ಹಣೆ; ಇಳಿ: ಕೆಳಕ್ಕೆ ಜಾರು; ನಸು: ಕೊಂಚ, ಸ್ವಲ್ಪ; ರಕ್ತ: ನೆತ್ತರು; ಬಿಂದು: ಹನಿ, ತೊಟ್ಟು;

ಪದವಿಂಗಡಣೆ:
ಉಳಿದ +ಮೂವರು +ಕಲಿ+ತ್ರಿಗರ್ತರ
ಗೆಲಿದ +ಪರಿಯನು +ಪಾರ್ಥ +ಕೌರವ
ಬಲಕೆ+ ಭಂಗವ +ತಂದ +ಪರಿಯನು +ಹೇಳುತಿರುತಿರಲು
ನಿಲುಕಿ+ ರಾಯನ +ಹಣೆಯ +ಗಾಯವ
ಬಳಿಕ+ ಕಂಡನ್+ಇದೇನು +ನೊಸಲಿಂದ್
ಇಳಿವುತಿದೆ +ನಸು +ರಕ್ತಬಿಂದುಗಳ್+ಎಂದನಾ +ಪಾರ್ಥ

ಅಚ್ಚರಿ:
(೧) ತ್ರಿಗರ್ತರ ಗೆಲಿದ ಪರಿ, ಕೌರವ ಬಲಕೆ ಭಂಗ ತಂದ ಪರಿ – ಪರಿ ಪದದ ಬಳಕೆ
(೨) ಹಣೆ, ನೊಸಲು – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ