ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೌನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ (ವಿರಾಟ ಪರ್ವ, ೧೦ ಸಂಧಿ, ೧ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಸೋಲು ಅಪಮಾನಗಳಿಂದ ಭಂಗಪಟ್ಟ ಕೌರವರು ಹಸ್ತಿನಾಪುರಕ್ಕೆ ಬಂದರು. ಮುಖಕ್ಕೆ ಮುಸುಕು ಹಾಕಿಕೊಂಡು, ವಾದ್ಯದ ಅಬ್ಬರವಿಲ್ಲದೆ ದುಃಖಸಂತಪ್ತರಾಗಿ ತಮ್ಮ ಮನೆಗಳಿಗೆ ಹೊಕ್ಕರು.
ಅರ್ಥ:
ಧರಿತ್ರೀ: ಭೂಮಿ; ಪಾಲ: ರಕ್ಷಕ; ಭಂಗ: ತುಂಡು, ಚೂರು; ಅಖಿಳ: ಎಲ್ಲಾ; ಜಾಲ: ಕಪಟ, ಮೋಸ; ತಿರುಗು: ಚಲಿಸು, ಸುತ್ತು; ದುಗುಡ: ದುಃಖ; ಗಜಪುರ: ಹಸ್ತಿನಾಪುರ; ನಡೆ: ಚಲಿಸು; ಮುಸುಕು: ಹೊದಿಕೆ; ಮೊಗ: ಮುಖ; ವಾದ್ಯ: ಸಂಗೀತದ ಸಾಧನ; ಮೇಳ: ಗುಂಪು; ಮೌನ: ನಿಶ್ಯಬ್ದ, ನೀರವತೆ; ಅಖಿಳ: ಎಲ್ಲಾ; ನೃಪ: ರಾಜ; ನಿಜಾಲಯ: ತಮ್ಮ ಮನೆ; ಬಂದು: ಆಗಮಿಸು; ಹೊಕ್ಕು: ಸೇರು; ಹೊತ್ತು: ಕರಿಕಾಗು; ದುಗುಡ: ದುಃಖ;
ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಭಂಗದಲ್+ಅಖಿಳ +ಕೌರವ
ಜಾಲ +ತಿರುಗಿತು +ದುಗುಡದಲಿ +ಗಜಪುರಕೆ+ ನಡೆತಂದು
ಮೇಲು +ಮುಸುಕಿನ+ ಮೊಗದ+ ವಾದ್ಯದ
ಮೇಳ +ಮೌನದಲ್+ಅಖಿಳ +ನೃಪರು +ನಿಜ
ಆಲಯಂಗಳ+ ಬಂದು +ಹೊಕ್ಕರು +ಹೊತ್ತ +ದುಗುಡದಲಿ
ಅಚ್ಚರಿ:
(೧) ಮ ಕಾರದ ಪದಗಳು – ಮೇಲು ಮುಸುಕಿನ ಮೊಗದ ವಾದ್ಯದ ಮೇಳ ಮೌನದಲಖಿಳ