ಪದ್ಯ ೧: ಕೌರವರು ಹೇಗೆ ಹಿಂದಿರುಗಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೌನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ (ವಿರಾಟ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸೋಲು ಅಪಮಾನಗಳಿಂದ ಭಂಗಪಟ್ಟ ಕೌರವರು ಹಸ್ತಿನಾಪುರಕ್ಕೆ ಬಂದರು. ಮುಖಕ್ಕೆ ಮುಸುಕು ಹಾಕಿಕೊಂಡು, ವಾದ್ಯದ ಅಬ್ಬರವಿಲ್ಲದೆ ದುಃಖಸಂತಪ್ತರಾಗಿ ತಮ್ಮ ಮನೆಗಳಿಗೆ ಹೊಕ್ಕರು.

ಅರ್ಥ:
ಧರಿತ್ರೀ: ಭೂಮಿ; ಪಾಲ: ರಕ್ಷಕ; ಭಂಗ: ತುಂಡು, ಚೂರು; ಅಖಿಳ: ಎಲ್ಲಾ; ಜಾಲ: ಕಪಟ, ಮೋಸ; ತಿರುಗು: ಚಲಿಸು, ಸುತ್ತು; ದುಗುಡ: ದುಃಖ; ಗಜಪುರ: ಹಸ್ತಿನಾಪುರ; ನಡೆ: ಚಲಿಸು; ಮುಸುಕು: ಹೊದಿಕೆ; ಮೊಗ: ಮುಖ; ವಾದ್ಯ: ಸಂಗೀತದ ಸಾಧನ; ಮೇಳ: ಗುಂಪು; ಮೌನ: ನಿಶ್ಯಬ್ದ, ನೀರವತೆ; ಅಖಿಳ: ಎಲ್ಲಾ; ನೃಪ: ರಾಜ; ನಿಜಾಲಯ: ತಮ್ಮ ಮನೆ; ಬಂದು: ಆಗಮಿಸು; ಹೊಕ್ಕು: ಸೇರು; ಹೊತ್ತು: ಕರಿಕಾಗು; ದುಗುಡ: ದುಃಖ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಭಂಗದಲ್+ಅಖಿಳ +ಕೌರವ
ಜಾಲ +ತಿರುಗಿತು +ದುಗುಡದಲಿ +ಗಜಪುರಕೆ+ ನಡೆತಂದು
ಮೇಲು +ಮುಸುಕಿನ+ ಮೊಗದ+ ವಾದ್ಯದ
ಮೇಳ +ಮೌನದಲ್+ಅಖಿಳ +ನೃಪರು +ನಿಜ
ಆಲಯಂಗಳ+ ಬಂದು +ಹೊಕ್ಕರು +ಹೊತ್ತ +ದುಗುಡದಲಿ

ಅಚ್ಚರಿ:
(೧) ಮ ಕಾರದ ಪದಗಳು – ಮೇಲು ಮುಸುಕಿನ ಮೊಗದ ವಾದ್ಯದ ಮೇಳ ಮೌನದಲಖಿಳ

ನಿಮ್ಮ ಟಿಪ್ಪಣಿ ಬರೆಯಿರಿ