ಪದ್ಯ ೭೬: ಸೇನೆಯು ಏನೆಂದು ನಿಶ್ಚೈಸಿದರು?

ಹುರುಳುಗೆಟ್ಟುದು ಗರುವತನವೆಂ
ದರಸನಾಚಿದನಧಿಕ ಶೌರ್ಯೋ
ತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟದಳಿವ ನಿಶ್ಚೈಸಿ (ವಿರಾಟ ಪರ್ವ, ೯ ಸಂಧಿ, ೭೬ ಪದ್ಯ)

ತಾತ್ಪರ್ಯ:
ತಮ್ಮ ಅಭಿಮಾನಕ್ಕೆ ಕುಂದು ಬಂದಿತೆಂದು ಕೌರವನು ನಾಚಿಕೊಂಡು ಮಹಾ ಶೌರ್ಯದಿಂದ ಮತ್ತೆ ಯುದ್ಧಕ್ಕೆ ನಿಂತನು. ರಾಜನಿಗುಂಟಾದ ಸಂಕಟವನ್ನು ಕಂಡು, ಸೈನ್ಯದ ನಾಯಕರು ಗುಂಪುಗಟ್ಟಿ, ಸಾವು ಇಲ್ಲವೆ ಗೆಲುವು ಎರಡರೊಳಗೊಂದಾಗಬೇಕೆಂದು ನಿಶ್ಚೈಸಿದರು.

ಅರ್ಥ:
ಹುರುಳು: ಸತ್ತ್ವ, ಸಾರ; ಕೆಟ್ಟು: ಹಾಳು; ಗರುವ: ಬಲಶಾಲಿ, ಗರ್ವ; ಅರಸ: ರಾಜ; ನಾಚು: ಅವಮಾನ ಹೊಂದು; ಅಧಿಕ: ಹೆಚ್ಚು; ಶೌರ್ಯ: ಪರಾಕ್ರಮ; ಉತ್ಕರುಷ:ಹೆಚ್ಚಳ, ಮೇಲ್ಮೆ; ಕಲಿ: ಶೂರ; ನಿಂದು: ನಿಲ್ಲು; ಕಾಳಗ: ಯುದ್ಧ; ದೊರೆ: ರಾಜ; ದುಗುಡ: ದುಃಖ; ಕಂಡು: ನೋಡು; ಉರವಣಿಸು: ಆತುರಿಸು; ಸಕಲ: ಎಲ್ಲಾ; ಸುಭಟ: ಸೈನಿಕರು; ಹೊರಳಿಗಟ್ಟು: ಒಟ್ಟು ಸೇರು; ಸೇನೆ: ಸೈನ್ಯ; ನಿಚ್ಚಟ: ಸ್ಪಷ್ಟವಾದುದು; ಅಳಿ: ನಾಶ; ನಿಶ್ಚೈಸು: ನಿರ್ಧರಿಸು;

ಪದವಿಂಗಡಣೆ:
ಹುರುಳುಗೆಟ್ಟುದು +ಗರುವತನವೆಂದ್
ಅರಸ+ ನಾಚಿದನ್+ಅಧಿಕ +ಶೌರ್ಯ
ಉತ್ಕರುಷದಲಿ +ಕಲಿಯಾಗಿ+ ನಿಂದನು+ ಮತ್ತೆ +ಕಾಳಗಕೆ
ದೊರೆಯ +ದುಗುಡವ +ಕಂಡು +ತಮತಮಗ್
ಉರವಣಿಸಿದರು +ಸಕಲ +ಸುಭಟರು
ಹೊರಳಿಗಟ್ಟಿತು +ಸೇನೆ +ನಿಚ್ಚಟದಳಿವ +ನಿಶ್ಚೈಸಿ

ಅಚ್ಚರಿ:
(೧) ದುರ್ಯೋಧನ ಶಕ್ತಿ – ಅಧಿಕ ಶೌರ್ಯೋತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ

ನಿಮ್ಮ ಟಿಪ್ಪಣಿ ಬರೆಯಿರಿ