ಪದ್ಯ ೪೯: ಅರ್ಜುನನನ್ನು ಯಾರು ಮುತ್ತಿದರು?

ಓಡಿದಾಳಲ್ಲಲ್ಲಿ ಧೈರ್ಯವ
ಮಾಡಿತೆಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದೊಳು
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನಗಂಭೀರ ಭೇರಿಯ ಬಹಳ ರಭಸದೊಳು (ವಿರಾಟ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಷ್ಮನು ಬಂದುದನ್ನು ನೋಡಿ ಓಡಿ ಹೋಗುತ್ತಿದ್ದ ಸೈನಿಕರು ಧೈರ್ಯಮಾಡಿ ಕೂಡಿಕೊಂಡರು. ಭಯದ ಆರ್ತನಾದ ನಿಂತುಹೋಯಿತು, ಚತುರಂಗ ಸೈನ್ಯವು ಒಂದಾಗಿ ಕೂಡಿ ಭೇರಿ ನಿನಾದವನ್ನು ಮಾಡುತ್ತಾ ಅರ್ಜುನನನ್ನು ಮುತ್ತಿತು.

ಅರ್ಥ:
ಓಡು: ಧಾವಿಸು; ಆಳು: ಸೈನಿಕ; ಧೈರ್ಯ: ಎದೆಗಾರಿಕೆ, ಕೆಚ್ಚು; ಒಗ್ಗು: ಒಟ್ಟುಗೂಡು, ಗುಂಪಾಗು; ಹುರಿ: ಕೆಚ್ಚು, ಬಲ; ಅಬ್ಬರ: ಜೋರಾದ ಶಬ್ದ; ಮಗುಳೆ: ಮತ್ತೆ; ನಿಬ್ಬರ:ಅತಿಶಯ, ಹೆಚ್ಚಳ; ನಿಮಿಷ: ಕ್ಷಣಮಾತ್ರದೊಳು; ಕೂಡೆ; ಜೊತೆಗೂಡು; ಗರಿಗಟ್ಟು: ಶಕ್ತಿಶಾಲಿಯಾಗು; ಚತುರ್ಬಲ: ಚತುರಂಗ ಸೈನ್ಯ; ಜೋಡು: ಜೊತೆ; ಕವಿ: ಆವರಿಸು; ಕೂಡೆ: ಜೊತೆ; ಘನ: ಶ್ರೇಷ್ಠ, ಗಾಢ; ಗಂಭೀರ: ಆಳವಾದುದು; ಭೇರಿ: ಡಂಗುರ, ನಗಾರಿ; ರಭಸ: ವೇಗ;

ಪದವಿಂಗಡಣೆ:
ಓಡಿದ್+ಆಳ್+ಅಲ್ಲಲ್ಲಿ +ಧೈರ್ಯವ
ಮಾಡಿತೆಚ್ಚಾಳ್+ಒಗ್ಗಿನಲಿ +ಹುರಿ
ಗೂಡಿತ್+ಅಬ್ಬರ +ಮಗುಳೆ +ನಿಬ್ಬರವಾಯ್ತು +ನಿಮಿಷದೊಳು
ಕೂಡೆ +ಗರಿಗಟ್ಟಿತು +ಚತುರ್ಬಲ
ಜೋಡು +ಮಾಡಿತು +ಕವಿದುದ್+ಈತನ
ಕೂಡೆ +ಘನಗಂಭೀರ +ಭೇರಿಯ +ಬಹಳ +ರಭಸದೊಳು

ಅಚ್ಚರಿ:
(೧) ಗರಿಗಟ್ಟು, ಹುರಿಗೂದು, ದೈರ್ಯವಮಾಡು – ಸಾಮ್ಯಾರ್ಥ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ