ಪದ್ಯ ೩೫: ಅರ್ಜುನನು ದ್ರೋಣರಿಗೆೆ ಏನು ಹೇಳಿದನು?

ದೇವ ಭಾರದ್ವಾಜ ಬಿಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನ ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ (ವಿರಾಟ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹೇ ಭಾರದ್ವಾಜ ದೇವ, ನೀನು ಧರ್ನುವಿದ್ಯೆಯಲ್ಲಿ ನೂತನ ರುದ್ರ, ಶಸ್ತ್ರಾವಳಿಗಳ ಪ್ರಯೋಗದಲ್ಲಿ ನೂತನ ಬ್ರಹ್ಮ, ಎಂದು ಅರ್ಜುನನು ದ್ರೋಣನನ್ನು ಹೊಗಳಿದನು. ದ್ರೋಣನ ಬಾಣಗಳ ಕತ್ತಲನ್ನು ತನ್ನ ಬಾಣಗಳ ಬಿಸಿಲಿನಿಂದ ನಾಶಪಡಿಸಿದನು.

ಅರ್ಥ:
ಭಾರದ್ವಾಜ: ದ್ರೋಣ; ಬಿಲು: ಚಾಪ; ವಿದ್ಯ: ಜ್ಞಾನ; ವಿಷಯ: ವಿಚಾರ; ನವ: ನೂತನ; ರುದ್ರ: ಶಿವನ ಅಂಶ; ಘನ: ಶ್ರೇಷ್ಠ; ಶಸ್ತ್ರ: ಆಯುಧ; ಆವಳಿ: ಗುಂಪು; ನಿರ್ಮಾಣ: ರಚನೆ; ಕಮಲಭವ: ಕಮಲದಲ್ಲಿ ಹುಟ್ಟಿದವ (ಬ್ರಹ್ಮ); ಕೋವಿದ: ಪಂಡಿತ; ಶರ: ಬಾಣ; ತಿಮಿರ: ಕತ್ತಲೆ; ಅಗಣಿತ: ಎಣಿಸಲಾಗದ; ಬಾಣ: ಶರ; ಭಾನು: ರವಿ; ಕರ: ಕಿರಣ, ರಶ್ಮಿ; ಆವಳಿ: ಗುಮ್ಪು; ಅಪಹರಿಸು: ನಾಶಪಡಿಸು, ಸಾಗಿಸು; ಸುರರಾಜ: ಇಂದ್ರ; ಸುತ: ಮಗ; ನಗು: ಹರ್ಷ;

ಪದವಿಂಗಡಣೆ:
ದೇವ +ಭಾರದ್ವಾಜ +ಬಿಲು +ವಿ
ದ್ಯಾ +ವಿಷಯ +ನವರುದ್ರ +ಘನ+ ಶ
ಸ್ತ್ರಾವಳೀ+ ನಿರ್ಮಾಣ +ನೂತನ+ ಕಮಲಭವಯೆನುತ
ಕೋವಿದನ +ಶರ+ತಿಮಿರವನು +ಗಾಂ
ಡೀವಿ+ಅಗಣಿತ +ಬಾಣ +ಭಾನು +ಕ
ರಾವಳಿಯಲ್+ಅಪಹರಿಸಿದನು +ಸುರರಾಜಸುತ +ನಗುತ

ಅಚ್ಚರಿ:
(೧) ದ್ರೋಣರನ್ನು ಹೊಗಳಿದ ಪರಿ – ದೇವ ಭಾರದ್ವಾಜ ಬಿಲು ವಿದ್ಯಾ ವಿಷಯ ನವರುದ್ರ ಘನ ಶಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
(೨) ಅರ್ಜುನನ ಕೌಶಲ್ಯ – ಕೋವಿದನ ಶರತಿಮಿರವನು ಗಾಂಡೀವಿಯಗಣಿತ ಬಾಣ ಭಾನು ಕರಾವಳಿಯಲಪಹರಿಸಿದನು ಸುರರಾಜಸುತ ನಗುತ

ನಿಮ್ಮ ಟಿಪ್ಪಣಿ ಬರೆಯಿರಿ